ಬೆಳ್ತಂಗಡಿ: ಟೇಲರ್ ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ವೇಣೂರು ಹಿಂದೂ ಜಾಗರಣ ವೇದಿಕೆ ವತಿಯಿಂದ ಭಾನುವಾರ ಇಲ್ಲಿಯ ಮುಖ್ಯಪೇಟೆಯಲ್ಲಿ ಪ್ರತಿಭಟನೆ ನಡೆಯಿತು.
ವೇದಿಕೆಯ ಪುತ್ತೂರು ಜಿಲ್ಲಾ ಸಹ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, 'ರಾಜಸ್ಥಾನದ ಉದಯಪುರದಲ್ಲಿ ನಡೆದ ಕ್ರೌರ್ಯ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ಹಿಂದೂ ವಿರೋಧಿ ಮದರಸಗಳನ್ನು ತಕ್ಷಣ ನಿಷೇಧ ಮಾಡಬೇಕು. ಏಕರೂಪದ ಶಿಕ್ಷಣ ನೀತಿ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.
‘ಈ ಹತ್ಯೆಗೆ ಅಲ್ಲಿನ ಸರ್ಕಾರ ಕೂಡಾ ಹೊಣೆಯಾಗಿದೆ. ಆ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು. ಹಂತಕರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು, ಕನ್ಹಯ್ಯ ಕುಟುಂಬಕ್ಕೆ ₹1 ಕೋಟಿ ಪರಿಹಾರವನ್ನು ನೀಡಬೇಕು’ ಎಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಯೋಜಕ ಜಗದೀಶ್ ನೆತ್ತರಕೆರೆ, ಜಿಲ್ಲಾ ಪ್ರಮುಖ್ ಪ್ರಶಾಂತ್ ಕೆಂಪುಗುಡ್ಡೆ, ರಕ್ಷಿತ್ ಸಾವ್ಯ, ತಾಲ್ಲೂಕು ಸಂಯೋಜಕ ನಿರಂಜನ್ ವೇಣೂರು, ಪರಿವಾರ ಸಂಘಟನೆಯ ರಕ್ಷಿತ್ ಬಜಿರೆ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನೇಮಯ್ಯ ಕುಲಾಲ್, ಜನಾರ್ದನ ಪೂಜಾರಿ ಇದ್ದರು.
ಉಮೇಶ್ ನಡ್ತಿಕಲ್ಲು ಪ್ರಸ್ತಾವಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಮುಖ್ ಕಿರಣ್ ಶೆಟ್ಟಿ ಮೂರ್ಜೆ ಸ್ವಾಗತಿಸಿ, ವಂದಿಸಿದರು.