ಮಂಗಳೂರು: ‘ಇದು ಹಿಂದೂ ರಾಷ್ಟ್ರ’ ಎಂದು ವಾದಿಸಿದ ಯುವಕನೊಬ್ಬನಿಗೆ ಮುಸ್ಲಿಂ ಯುವಕರ ಗುಂಪೊಂದು ನಗರದ ಮಾಲ್ ಒಂದರಲ್ಲಿ ಬುಧವಾರ ಮಧ್ಯಾಹ್ನ ಹಲ್ಲೆ ನಡೆಸಿದೆ. ಘಟನೆಯ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಬಂಟ್ವಾಳ ತಾಲ್ಲೂಕಿನ ಮಂಜುನಾಥ್ ಹಲ್ಲೆಗೊಳಗಾದ ಯುವಕ. ಇಲ್ಲಿನ ಫೋರಂ ಫಿಝಾ ಮಾಲ್ನಲ್ಲಿ ಬುಧವಾರ ಮಧ್ಯಾಹ್ನ ಚಹಾ ಕುಡಿಯಲು ಬಂದಿದ್ದ ವೇಳೆ ಈ ಯುವಕನಿಗೂ ಇನ್ನೊಂದು ಗುಂಪಿಗೂ ಮಾತಿನ ಚಕಮಕಿ ನಡೆದಿದೆ. ಆಗ ಸುತ್ತುವರಿದ ಮುಸ್ಲಿಂ ಯುವಕರು, ‘ಹಿಂದೂ ರಾಷ್ಟ್ರ ಎಂದು ಈಗ ಹೇಳು’ ಎಂದು ಬಲವಂತ ಮಾಡಿದ್ದಾರೆ. ಆತ ಪುನರುಚ್ಛರಿಸಿದಾಗ ಹಲ್ಲೆ ನಡೆಸಿದ್ದಾರೆ.
ಘಟನೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ವಾಟ್ಸ್ ಆ್ಯಪ್, ಫೇಸ್ ಬುಕ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲಾಗಿದೆ. ಹಲ್ಲೆ ನಡೆಸಿದವರ ಕುರಿತು ಮಾಹಿತಿ ಲಭ್ಯವಾಗಿದೆ. ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.