ಮಂಗಳೂರು: ‘ಗೃಹರಕ್ಷಕರು ದಿನದ 24 ಗಂಟೆಯೂ ಜನರ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಂದೋಬಸ್ತ್ ಕರ್ತವ್ಯಗಳಲ್ಲಿ ಪೊಲೀಸರೊಂದಿಗೆ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾರೆ. ಸಮಾಜ ಮತ್ತು ಸರ್ಕಾರ, ಇವರ ಸೇವೆಯನ್ನು ಗುರುತಿಸಿ ಗೌರವಿಸಬೇಕು’ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೊನಾವಣೆ ಹೇಳಿದರು.
ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ಗೃಹರಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟ ಡಾ. ಮುರಲೀಮೋಹನ ಚೂಂತಾರು ಅಧ್ಯಕ್ಷತೆ ವಹಿಸಿ, ‘ಜಿಲ್ಲೆಯ ಗೃಹರಕ್ಷಕರು ಪೊಲೀಸ್ ಠಾಣೆಗಳ ಕರ್ತವ್ಯ, ಬಂದೋಬಸ್ತ್ , ಕೋವಿಡ್ ಮಾರ್ಷಲ್, ಚೆಕ್ಪೋಸ್ಟ್ ಕರ್ತವ್ಯ, ಸಾಗರ ಕವಚ, ಚುನಾವಣೆ, ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಷ್ಕಾಮ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
ಬೆಳ್ಳಾರೆ ಘಟಕದ ಪರೇಡ್ ಕಮಾಂಡರ್ ವಸಂತ್ ಕುಮಾರ್ ಮುಂದಾಳತ್ವದ ಪಥ ಸಂಚಲನದಲ್ಲಿ ಸಾರ್ಜೆಂಟ್ಗಳಾದ ರಮೇಶ್ ಭಂಡಾರಿ, ಲೀಲಾ ಕುಕ್ಯಾನ್, ಶುಭಾ ಕುಲಾಲ್,ಎ.ಎಸ್.ಎಲ್ ರಾಜಶ್ರೀ, ಸುನೀಲ್ ಕುಮಾರ್ ನೇತೃತ್ವದಲ್ಲಿ ತುಕಡಿಗಳು ಪಾಲ್ಗೊಂಡವು. ಕೋವಿಡ್ ಸಂಕಷ್ಟದ ದಿನಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ತೀರ್ಥೇಶ್, ಅಭಿಮನ್ಯು ರೈ, ದಿನೇಶ್ ಹಾಗೂ ಸುನಿಲ್ ಅವರನ್ನು ಸನ್ಮಾನಿಸಲಾಯಿತು.
ಉಪ ಸಮಾದೇಷ್ಟ ರಮೇಶ್,ಘಟಕಾಧಿಕಾರಿ ಮಾರ್ಕ್ಶೇರ್, ರಾಘವೇಂದ್ರ, ಕಚೇರಿ ಅಧೀಕ್ಷಕ ರತ್ನಾಕರ, ಘಟಕಾಧಿಕಾರಿಗಳಾದ ರಮೇಶ್, ಐತಪ್ಪ, ಸಾರ್ಜೆಂಟ್ ಜಗನ್ನಾಥ್ ಪಿ., ಸಿಬ್ಬಂದಿ ಅನಿತಾ ಟಿ.ಎಸ್., ದಲಾಯತ್ ಮೀನಾಕ್ಷಿ ಇದ್ದರು.