ಕಡಬ( ಉಪ್ಪಿನಂಗಡಿ): ಧಾರಾಕಾರ ಮಳೆಗೆ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಗುಂಡ್ಯ ಹೊಳೆಯ ಹೊಸ್ಮಠ ಮುಳುಗು ಸೇತುವೆ ಶನಿವಾರ ಬೆಳಿಗ್ಗಿನಿಂದ ಮುಳುಗಡೆಗೊಂಡು ಸುಮಾರು 5 ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಯಿತು.
ರಾತ್ರಿಯಿಂದ ಸುರಿದ ಬಿರುಸಿನ ಮಳೆ ಮತ್ತು ಘಟ್ಟದ ಮೇಲಿಂದ ಬಂದ ನೀರಿನ ಪ್ರವಾಹಕ್ಕೆ ಬೆಳಿಗ್ಗಿನಿಂದಲೇ ಸೇತುವೆಯ ಮೇಲೆ ನೀರು ಹರಿದಾಡಲಾರಂಭಿಸಿತ್ತು. ಕ್ರಮೇಣ 10 ಗಂಟೆಯ ಹೊತ್ತಿಗೆ ಒಂದೇ ಸವನೆ ಏರಿಕೆ ಆಗಿ ಸೇತುವೆ ಮೇಲೆ ಸುಮಾರು 6 ಅಡಿ ಎತ್ತರ ನೀರು ಹರಿಯುತ್ತಿದ್ದುದು ಕಂಡು ಬಂದಿದೆ.
ಮಧ್ಯಾಹ್ನದ ಹೊತ್ತಿಗೆ ಮಳೆ ತುಸು ಕಡಿಮೆ ಆಗುತ್ತಿದ್ದಂತೆ ಸೇತುವೆ ಮೇಲೆ ನೀರಿನ ಪ್ರವಾಹವೂ ಕಡೆಮೆ ಆಗಿ ಸುಮಾರು 3 ಗಂಟೆಯ ಹೊತ್ತಿಗೆ ನೀರು ಸಂಪೂರ್ಣ ಇಳಿಯಿತು. ಬಳಿಕ ಸೇತುವೆ ಮೇಲೆ ವಾಹನ ಸಂಚಾರ ಆರಂಭಿಸಲಾಯಿತು.
ಅತ್ತಿತ್ತ ಹೋದರು: ಮುಳುಗು ಸೇತುವೆ ಸನಿಹದಲ್ಲಿ ನೂತನ ಸೇತುವೆ ನಿರ್ಮಾಣ ಹಂತದಲ್ಲಿದ್ದು, ಎರಡೂ ಕಡೆ ಸಂಪರ್ಕ ರಸ್ತೆ ಬಾಕಿ ಇರುತ್ತದೆ. ಆದರೆ ಇಲ್ಲಿ ಎತ್ತರಿಸಿ ಮಣ್ಣು ಹಾಕಲಾಗಿದೆ.ಹೀಗಾಗಿ ಪಾದಚಾರಿಗಳು ಇದನ್ನು ಬಳಸಿಕೊಂಡು ಇಕ್ಕಡೆಯಿಂದಲೂ ಅತ್ತಿತ್ತ ದಾಟುತ್ತಿದ್ದುದು ಕಂಡು ಬಂತು.
ಪೊಲೀಸ್ ಪಹರೆ: ಸೇತುವೆ ಮೇಲೆ ನೀರು ಹರಿಯುವ ಸಂದರ್ಭದಲ್ಲಿ ವಾಹನಗಳು ಮುನ್ನಗ್ಗದಂತೆ ಇಕ್ಕಡೆಗಳಲ್ಲಿ ಕಡಬ ಪೊಲೀಸರು ಮತ್ತು ಗೃಹರಕ್ಷಕದಳ ಸಿಬ್ಬಂದಿಗಳು ರಕ್ಷಣಾ ಗೇಟು ಹಾಕಿ ಭದ್ರತೆ ಕೈಗೊಂಡಿರುವುದು ಕಂಡು ಬಂತು.