ಮಂಗಳೂರು: ಹೋಟೆಲ್ ಅಸೋಸಿಯೇಷನ್ ವತಿಯಿಂದ ಹೋಟೆಲ್ ಕಾರ್ಮಿಕರಿಗೆ ಕೋವಿಡ್ ತಡೆ ಲಸಿಕೆ ಕಾರ್ಯಕ್ರಮ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಬುಧವಾರ ಆರಂಭಿಸಲಾಯಿತು.
ಚಾಲನೆ ನೀಡಿ ಮಾತನಾಡಿದ ಶಾಸಕ ಡಾ.ವೈ. ಭರತ್ ಶೆಟ್ಟಿ, ಈ ಮೊದಲು ಜನರು ಕೆಲವು ಊಹಾಪೋಹಗಳಿಂದ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದು, ಈಗ ಎಚ್ಚೆತ್ತುಕೊಂಡಿದ್ದಾರೆ. ಜನರು ಲಸಿಕೆಯ ಬಗ್ಗೆ ಭಯ ಪಡಬಾರದು ಲಸಿಕೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇಲ್ಲ ಎಂದು ತಿಳಿಸಿದರು.
ಸೋಂಕಿತರು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ ಮನೆಯಲ್ಲಿರುವ ಇತರರಿಗೂ ಸೋಂಕು ಹರಡುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ನಾವು ಸುರಕ್ಷಿತವಾಗುವುದರೊಂದಿಗೆ ಸಮಾಜವನ್ನು ಸುರಕ್ಷಿತವಾಗಿಡಬೇಕು ಎಂದರು.
ಪಾಲಿಕೆ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಸಂಘದ ಗೌರವಾಧ್ಯಕ್ಷ ರಾಜ್ಗೋಪಾಲ್ ರೈ, ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಿಶಾಂಕ್ ಸುವರ್ಣ, ಸಚಿನ್ ರೈ, ಅಬ್ರಾರ್, ಡಾ. ಜಗದೀಶ್, ಡಾ.ವಿದ್ಯಾ, ಅಶೋಕ್, ವಿಕಾಸ್, ರೂಪೇಶ್ ಇದ್ದರು.