ಉಳ್ಳಾಲ (ದಕ್ಷಿಣ ಕನ್ನಡ): ಕೇರಳದಿಂದ ಜಿಲ್ಲೆಗೆ ಬರುವ ಜನರಲ್ಲಿ ಕೋವಿಡ್ ಸೋಂಕು ಹೆಚ್ಚು ಪತ್ತೆಯಾಗುತ್ತಿದ್ದು, ತಲಪಾಡಿಯ ಗಡಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ, ತಹಶೀಲ್ದಾರ್ ನೇತೃತ್ವದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
ಕೇರಳದಿಂದ ಬರುವವರ ಮೇಲೆ ತಲಪಾಡಿಯಲ್ಲಿ ನಿಗಾ ವಹಿಸಲಾಗಿದೆ. ವಾಹನ ತಡೆದು ಆರ್ಟಿಪಿಸಿಆರ್ ವರದಿಯನ್ನು ಅಧಿಕಾರಿಗಳು ಕೇಳುತ್ತಿದ್ದಾರೆ.
ಬೆಳಿಗ್ಗೆ ಕೇರಳ ಸಾರಿಗೆ ಬಸ್ ಅನ್ನು ತಡೆದ ಅಧಿಕಾರಿಗಳು ತಪಾಸಣೆ ನಡೆಸಿದರು. ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.
ಶುಕ್ರವಾರ ವಾಹನಗಳಿಗೆ ತೆರಳಲು ಅವಕಾಶ ಕಲ್ಪಿಸಿದ ಅಧಿಕಾರಿಗಳು, ಶನಿವಾರ ಕಡ್ಡಾಯ ವರದಿ ತರುವಂತೆ ಸೂಚಿಸಿದ್ದಾರೆ.
ತಲಪಾಡಿಯ ಕೋವಿಡ್ ತಪಾಸಣೆ ಕೇಂದ್ರದಲ್ಲಿ ಉಚಿತ ಪರೀಕ್ಷೆಗೆ ಅವಕಾಶ ನೀಡಲಾಗಿದೆ.
ಸ್ಥಳದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಚಂದ್ರ ಬಾಯರಿ, ತಹಶೀಲ್ದಾರ್ ಗುರುಪ್ರಸಾದ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಕಂದಾಯ ನಿರೀಕ್ಷಕ ಸ್ಟೀಫನ್, ತಲಪಾಡಿ ಪಿಡಿಒ ಕೇಶವ ಪೂಜಾರಿ, ಗೃಹರಕ್ಷಕ ದಳ ಹಾಗೂ ಉಳ್ಳಾಲ ಪೊಲೀಸರ ತಂಡ ಪರಿಶೀಲನೆ ನಡೆಸುತ್ತಿದೆ.