ಮಂಗಳೂರು: ಕೋವಿಡ್–19 ಸೋಂಕು ಪತ್ತೆಯಾಗಿದ್ದರಿಂದ ಸೀಲ್ಡೌನ್ ಮಾಡಲಾಗಿರುವ ಬೋಳೂರು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಶನಿವಾರ ಭೇಟಿ ನೀಡಿ, ಅಲ್ಲಿನ ಜನರ ಜತೆಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಸುಮಾರು 136 ಮನೆಗಳಿದ್ದು, ಸಾಕಷ್ಟು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಸಹಾಯ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಈ ಪ್ರದೇಶದಲ್ಲಿ ಕೂಲಿಕಾರ್ಮಿಕರು, ಬಡಜನರು ಹೆಚ್ಚಾಗಿದ್ದು, ಅವರಿಗೆ ದಿನನಿತ್ಯದ ಸಾಮಗ್ರಿಗಳನ್ನು ಒದಗಿಸಬೇಕಾಗಿದೆ.
ದಾನಿಗಳು ಈ ಸಂದರ್ಭದಲ್ಲಿ ಹಾಲು, ದಿನಸಿ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ನೆರವಿನ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.
‘ಶಾಸಕನಾಗಿ ಏನೆಲ್ಲ ಸಹಾಯ ಮಾಡಬಹುದೋ, ಅದನ್ನೆಲ್ಲ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಐವನ್ ಡಿಸೋಜ ಭರವಸೆ ನೀಡಿದರು.