ಭಾಲ್ಕಿ: ಬಿಜೆಪಿ ಅಭ್ಯರ್ಥಿ ಡಿ.ಕೆ.ಸಿದ್ರಾಮ ಸೋಮವಾರ ಅಪಾರ ಬೆಂಬಲಿಗರೊಂದಿಗೆ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಭಾಲ್ಕೇಶ್ವರ ಮಂದಿರ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮೂಲಕ ಅಂಬೇಡ್ಕರ್, ಮಹಾತ್ಮ ಗಾಂಧಿ, ಬಸವೇಶ್ವರ ವೃತ್ತ ಮುಖಾಂತರ ಸಾಗಿ ತಹಶೀಲ್ದಾರ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಮಹಾತ್ಮ ಗಾಂಧಿ ವೃತ್ತದಲ್ಲಿ ಮಾತನಾಡಿದ ಸಿದ್ರಾಮ ಅವರು, ‘ಪ್ರಕಾಶ ಖಂಡ್ರೆ ಅವರು ನನ್ನನ್ನು ಸೋಲಿಸಬೇಕು ಎಂಬ ದುರುದ್ದೇಶದಿಂದಲೇ ಜೆಡಿಎಸ್ ಸೇರಿದ್ದಾರೆ. ಹಾಗೆಯೇ ಬಿಜೆಪಿ ಧ್ವಜ ಸುಡುವ ಮೂಲಕ ದ್ರೋಹದ ಕೆಲಸ ಮಾಡಿದ್ದಾರೆ. ಬಡ ಸೈನಿಕನ ಮಗನಾದ ನನಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡಬೇಕು. ಆ ಮೂಲಕ ಭಾಲ್ಕಿಯಲ್ಲಿ ಖಂಡ್ರೆ ಮನೆತನದ ಪಾರುಪತ್ಯವನ್ನು ಅಂತ್ಯಗೊಳಿಸಬೇಕು’ ಎಂದು ಮನವಿ ಮಾಡಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕಿನ ವಿವಿಧ ಹಳ್ಳಿಗಳ ಬಿಜೆಪಿ ಕಾರ್ಯಕರ್ತರು ಡಿ.ಕೆ.ಸಿದ್ರಾಮ ಅವರಿಗೆ ಜಯವಾಗಲಿ, ಬಿಜೆಪಿ ಜಯವಾಗಲಿ. ಡಿ.ಕೆ.ಸಿದ್ರಾಮ ತುಮ್ ಆಗೇ ಬಡೋ ಹಮ್ ತುಮ್ಹಾರೆ ಸಾಥ್ ಹೈ ಎನ್ನುವ ಘೋಷಣೆ ಕೂಗಿದರು.
ಜನರಲ್ಲಿ ಕೈಯಲ್ಲಿ ಬಿಜೆಪಿ ಧ್ವಜ, ಕೊರಳಲ್ಲಿ ಕಮಲದ ಚಿನ್ಹೆ ಇರುವ ಕೇಸರಿ ಧ್ವಜಗಳು ರಾರಾಜಿಸಿದವು. ಡಿ.ಕೆ.ಸಿದ್ರಾಮ ದಂಪತಿ ಉಡಿಬಿಚ್ಚಿ ಜನರ ಬಳಿ ಹಣಕಾಸಿನ ನೆರವು ಕೇಳಿದಾಗ ಕಾರ್ಯಕರ್ತರು ಭಾವುಕರಾಗಿ ತಮ್ಮ ಕೈಲಾದಷ್ಟು ಹಣವನ್ನು ಉಡಿಯಲ್ಲಿ ಹಾಕಿದರು. ಜನರ ಪ್ರೀತಿ, ಪ್ರೋತ್ಸಾಹವನ್ನು ಕಂಡ ಡಿ.ಕೆ.ಸಿದ್ರಾಮ ಅವರ ಕಣ್ಣುಗಳು ಒದ್ದೆಯಾಗಿದ್ದವು. ಇದಕ್ಕೂ ಮುನ್ನ ಭಾಲ್ಕೇಶ್ವರ ಮಂದಿರದಲ್ಲಿ ಡಿ.ಕೆ.ದಂಪತಿ ವಿಶೇಷ ಪೂಜೆ ಸಲ್ಲಿಸಿದರು.