ಮಂಗಳೂರು: ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡ್ ವ್ಯಾಪ್ತಿಯ ವಾಸುಕಿನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
‘ವಾಸುಕಿ ನಗರದಲ್ಲಿ ವೇದಿಕೆ ನಿರ್ಮಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿತ್ತು. ಪಾಲಿಕೆಯ ಜಾಗದಲ್ಲಿ ವೇದಿಕೆ ಹಾಗೂ ಗ್ರೀನ್ ರೂಮ್ ನಿರ್ಮಾಣಕ್ಕೆ ₹ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದು ಕಾಮತ್ ಹೇಳಿದರು.
‘ವಾರ್ಡಿನಲ್ಲಿ ರಸ್ತೆ ನಿರ್ಮಾಣ, ಚರಂಡಿ, ತಡೆಗೋಡೆ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗುವ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹಾಗಾಗಿ ಈ ಸಲ ವಾರ್ಡಿನಲ್ಲಿ ಪ್ರವಾಹದ ಹಾವಳಿ ಕಡಿಮೆಯಾಗಿದೆ’ ಎಂದು ಕಾಮತ್ ತಿಳಿಸಿದರು.
ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ನಯನ ಆರ್. ಕೋಟ್ಯಾನ್, ಪಾಲಿಕೆ ಸದಸ್ಯರಾದ ವೀಣಾ ಮಂಗಳಾ, ಪ್ರವಿಣ್ ಚಂದ್ರ ಆಳ್ವ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ ಇದ್ದರು.