ಬೆಂಗಳೂರು: ವಿಧಾನಸಭಾ ಚುನಾವಣಾ ಪ್ರಯುಕ್ತ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರು ಹಾಗೂ ಪೊಲೀಸರು ಕೆ.ಆರ್.ಪುರದಲ್ಲಿ ಸೋಮವಾರ ಪಥಸಂಚಲನ ನಡೆಸಿದರು.
200 ಪೊಲೀಸರು ಮತ್ತು 100 ಯೋಧರು ತಾಲ್ಲೂಕು ಕಚೇರಿಯಿಂದ ಹೊರಟು ಮಸೀದಿ ರಸ್ತೆ, ದೇವಸಂದ್ರ ಮುಖ್ಯರಸ್ತೆ, ಅಯ್ಯಪ್ಪನಗರ, ಭಟ್ಟರಹಳ್ಳಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಮತದಾರರು ನಿರ್ಭಯವಾಗಿ ಮತ ಚಲಾಯಿಸಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವೈಟ್ಫೀಲ್ಡ್ ವಿಭಾಗ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.
ಮಹದೇವಪುರ ವಲಯದ ಜಂಟಿ ಆಯುಕ್ತೆ ವಾಸಂತಿ ಅಮರ್, ‘ಮಹಿಳಾ ಮತದಾರರು ಹೆಚ್ಚಾಗಿರುವ ಕಡೆಗಳಲ್ಲಿ ಸಖಿ ಮತಗಟ್ಟೆಗಳನ್ನು (ಪಿಂಕ್ ಮತಗಟ್ಟೆ) ಸ್ಥಾಪಿಸಲಾಗುತ್ತದೆ. ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ಮತ ಚಲಾಯಿಸಬೇಕು’ ಎಂದು ಮನವಿ ಮಾಡಿದರು.