ಸುಬ್ರಹ್ಮಣ್ಯ: ‘ಯುವ ಸಮೂಹ ಕಬಡ್ಡಿ ಕ್ರೀಡೆಯಲ್ಲಿ ಉತ್ಸುಕವಾಗಿದ್ದು, ಕಬಡ್ಡಿಗೆ ಪ್ರೋತ್ಸಾಹದ ಅವಶ್ಯಕತೆಯಿದೆ, ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಬಡ್ಡಿ ಕೋಂಚಿಂಗ್ ಸೆಂಟರ್ ತೆರೆದು ಕಬಡ್ಡಿಗೆ ಪ್ರೋತ್ಸಾಹ ನೀಡಬೇಕು’ ಎಂದರು ಅಂತರರಾಷ್ಟ್ರೀಯ ಕಬಡ್ಡಿ ಪಟು ಜಗದೀಶ ಕುಂಬಳೆ ಹೇಳಿದರು.
ಸುಬ್ರಹ್ಮಣ್ಯಕ್ಕೆ ಬಂದಿದ್ದ ಅವರು ‘ಪ್ರಜಾವಾಣಿ’ ಪ್ರತಿನಿಧಿ ಜತೆ ಮಾತನಾಡಿದರು.‘ಗ್ರಾಮೀಣ ಭಾಗದಲ್ಲಿ ಪ್ರತಿಭಾನ್ವಿತ ಉತ್ತಮ ಕಬಡ್ಡಿ ಪಟುಗಳಿದ್ದಾರೆ. ಅವರಿಗೆ ಪ್ರೋತ್ಸಾಹ ಅಗತ್ಯ. ಇದಕ್ಕೆ ಕಬಡ್ಡಿ ತರಬೇತು ಕೇಂದ್ರಗಳ ಅವಶ್ಯಕವಿದೆ’ ಎಂದರು.
‘ಇಂದು ಗ್ರಾಮೀಣ ಸೊಗಡಿನ ಈ ಕ್ರೀಡೆಯು ಪ್ರೊ. ಕಬಡ್ಡಿ ಲೀಗ್ ಪಂದ್ಯಾಟ, ಕಬಡ್ಡಿ ವಿಶ್ವಕಪ್ ಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸುತ್ತಿದೆ. ಸದ್ಯ ಗಡಿನಾಡ ಕಾಸರಗೋಡಿನಲ್ಲಿ ಕಬಡ್ಡಿ ಕೋಚಿಂಗ್ ಸೆಂಟರ್ ತೆರೆದು ತರಬೇತಿ ನೀಡುತ್ತಿದ್ದೇನೆ. ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಸೆಂಟರ್ ಆರಂಭಿಸುವ ಆಸಕ್ತಿ ಇದ್ದು ಈ ಬಗ್ಗೆ ಪ್ರಯತ್ನಿಸಿದೆ. ಆದರೆ ಅದು ಸಪಲವಾಗಲಿಲ್ಲ. ಅವಕಾಶ ಸಿಕ್ಕಿದರೆ ಕಬಡ್ಡಿ ಕೋಚಿಂಗ್ ಸೆಂಟರ್ ತೆರೆಯಲು ಸಿದ್ಧ. ಅವಕಾಶ ಸಿಕ್ಕಾಗಲೆಲ್ಲ ನಾನೇ ಬಂದು ತರಬೇತು ನೀಡಲು ಸಿದ್ಧನಿದ್ದೇನೆ’ ಎಂದರು.
ಯುವ ಕಬಡ್ಡಿ ಆಟಗಾರರು ಸತತ ಅಭ್ಯಾಸ, ಮಾರ್ಗದರ್ಶನದಿಂದ ಕಬಡ್ಡಿಯನ್ನು ಜೀವನಾಧಾರವನ್ನಾಗಿಸುತ್ತಿದ್ದಾರೆ. ಸಾಮಾನ್ಯವಾಗಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರೆ ಆಡುವ ಈ ಕ್ರೀಡೆಯಲ್ಲಿ ಹಲವು ಹೊಸ ಮುಖಗಳು ಕಾಣಿಸುತ್ತಿವೆ. ಇನ್ನಷ್ಟು ಅವಕಾಶ ಪ್ರೋತ್ಸಾಹಗಳು ದೊರೆತಲ್ಲಿ ಕಬಡ್ಡಿ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ’ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಯೇನೆಕಲ್, ಚಂದ್ರಶೇಖರ ನಾಯರ್ ಉಪಸ್ಥಿತರಿದ್ದರು.