ರಾಮನಗರ: ಚನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಅಂಗವಾಗಿ ಎರಡೂ ನಗರಗಳಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು.
ರಾಮನಗರ ತಹಶೀಲ್ದಾರ್ ಕಚೇರಿಗೆ ಮಧ್ಯಾಹ್ನ 2.45ಕ್ಕೆ ಧಾವಿಸಿದ ಎಚ್ಡಿಕೆ ತರಾತುರಿಯಲ್ಲಿಯೇ ಚುನಾವಣಾ ಅಧಿಕಾರಿಗಳ ಕಚೇರಿಯತ್ತ ಹೆಜ್ಜೆ ಹಾಕಿದರು. ಪತ್ನಿ ಅನಿತಾ ಹಾಗೂ ಪಕ್ಷದ ಮುಖಂಡ ಫಾರೂಕ್ ಜೊತೆಗೂಡಿ ಕ್ಷೇತ್ರದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು.
ಮಿನಿ ವಿಧಾನಸೌಧದ ಸುತ್ತಮುತ್ತ ಸಾವಿರಾರು ಕಾರ್ಯಕರ್ತರು ಕುಮಾರಸ್ವಾಮಿ ಬರುವಿಕೆಗಾಗಿ ಕಾದು ಕುಳಿತಿದ್ದರು. ನಾಮಪತ್ರ ಸಲ್ಲಿಸಿ ಹೊರಕ್ಕೆ ಬರುತ್ತಲೇ ಮೆರವಣಿಗೆಗೆ ಚಾಲನೆ ದೊರೆಯಿತು. ಎಲ್ಲೆಡೆ ಜೆಡಿಎಸ್ ಬಾವುಟಗಳು ರಾರಾಜಿಸಿದವು.