ಮಂಗಳೂರು: ಬೆಡ್ ಶೀಟ್ ಮಾರಾಟಕ್ಕೆ ತೆರಳಿದ್ದ ಮಹಮ್ಮದ್ ರಫೀಕ್ ಮತ್ತು ರಮೀಜುದ್ದೀನ್ ಅವರ ಮೇಲೆ ಕಡಬ ತಾಲ್ಲೂಕಿನ ಕಾಣಿಯೂರಿನಲ್ಲಿ ಬರ್ಬರವಾಗಿ ಹಲ್ಲೆ ನಡೆಸಿ, ಕೊಲೆಯತ್ನ ನಡೆಸಿರುವುದು ಖಂಡನೀಯ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಹೇಳಿದೆ.
ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಯುವಕರನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ನೇತೃತ್ವದ ನಿಯೋಗವು ಶನಿವಾರ ಭೇಟಿ ನೀಡಿ ಸಾಂತ್ವನ ಹೇಳಿತು.
‘ಹಲ್ಲೆ ನಡೆಸಿದವರು ಯುವಕರ ಕಾರನ್ನು ಜಖಂಗೊಳಿಸಿದ್ದಲ್ಲದೇ, ಅದರಲ್ಲಿದ್ದ ಬೆಡ್ ಶೀಟ್ಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದ ಯುವಕರಿಗೆ ₹ 2 ಲಕ್ಷ ನಷ್ಟ ಉಂಟಾಗಿದೆ’ ಎಂದೂ ಕಮಿಟಿ ಆರೋಪಿಸಿದೆ.
ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಕಮಿಟಿಯು ಒತ್ತಾಯಿಸಿದೆ.