ಬಂಟ್ವಾಳ: ಬಂಟ್ವಾಳ ವಿಧಾನಸಣಾ ಕ್ಷೇತ್ರ ವ್ಯಾಪ್ತಿಯ 58 ಗ್ರಾಮಗಳಲ್ಲಿ ಕ್ಷೇತ್ರ ಬಿಜೆಪಿ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ಇದೇ 14ರಿಂದ 26ರ ತನಕ ‘ಗ್ರಾಮ ವಿಕಾಸ ಯಾತ್ರೆ’ ಗ್ರಾಮದೆಡೆಗೆ ಶಾಸಕರ ನಡಿಗೆ ಎಂಬ ವಿನೂತನ ರೀತಿಯಲ್ಲಿ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಸಮಿತಿ ಸಂಚಾಲಕ ಬಿ.ದೇವದಾಸ ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಎರಡು ಪಾದಯಾತ್ರೆ ನಡೆಸಿದ್ದ ಶಾಸಕರು ಈ ಬಾರಿ ಕ್ಷೇತ್ರದಾದ್ಯಂತ ಅಹವಾಲು ಸ್ವೀಕರಿಸಿ ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡುವರು ಎಂದರು. ಪ್ರತಿದಿನ 30 ಕಿ.ಮೀ.ಪಾದಯಾತ್ರೆ ನಡೆಸಿ, ಅಲ್ಲಿನ ಕಾರ್ಯಕರ್ತರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದರು.
ಇದೇ 14ರಂದು ಮಧ್ಯಾಹ್ನ 2 ಗಂಟೆಗೆ ಪೊಳಲಿ ಕ್ಷೇತ್ರದಿಂದ ಆರಂಭಗೊಳ್ಳಲಿರುವ ಪಾದಯಾತ್ರೆ ಒಟ್ಟು 13 ದಿನಗಳ ತನಕ ವಿವಿಧ ದೇವಸ್ಥಾನ ಮತ್ತು ದೈವಸ್ಥಾನಗಳ ಮೂಲಕ ಸಾಗಿ ಬಂದು ಇದೇ 26ರಂದು ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರ ಬಳಿ ಸಮಾರೋಪಗೊಳ್ಳಲಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಂಸದ ನಳಿನ್ ಕುಮಾರ್ ಕಟೀಲು, ಪ್ರಮುಖರಾದ ಸಿ.ಟಿ.ರವಿ, ವಿ.ಸುನಿಲ್ ಕುಮಾರ್, ಎಸ್.ಅಂಗಾರ, ಆರ್.ಅಶೋಕ್, ಡಾ.ಅಶ್ವತ್ಥ್ನಾರಾಯಣ ಮತ್ತಿತರ ನಾಯಕರು ಭಾಗವಹಿಸುವರು ಎಂದು ತಿಳಿಸಿದರು.