ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ದಿಡುಪೆ ಹಾಗೂ ಚಾರ್ಮಾಡಿ ಭಾಗದಲ್ಲಿ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಸೇತುವೆಗಳ ದುರಸ್ತಿ, ಸಂಪರ್ಕ ರಸ್ತೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಚಾರ್ಮಾಡಿ ಹೊಸಮಠ ಸೇತುವೆ ಹಾಗೂ ಕುಕ್ಕಾವು ಅಗರಿಮಾರು ಸೇತುವೆಗಳ ಸಂಪರ್ಕ ರಸ್ತೆ ಪೂರ್ತಿಯಾಗಿ ಕೊಚ್ಚಿ ಹೋಗಿದ್ದು, ಅವುಗಳಿಗೆ ತಾತ್ಕಾಲಿಕ ಸಂಪರ್ಕ ಕಲ್ಪಿಸಲಾಗುತ್ತಿದೆ. ಕುಕ್ಕಾವು ಸೇತುವೆಯ ಸಂಪರ್ಕಕ್ಕೆ ಮರಗಳಿಂದ ತಾತ್ಕಾಲಿಕ ಸಂಪರ್ಕ ಹಲಗೆ ನಿರ್ಮಾಣ ನಡೆಯುತ್ತಿದೆ.
ಜೆಸಿಬಿ ಯಂತ್ರಗಳಿಂದ ನದಿ ಹರಿವನ್ನು ಸ್ವಸ್ಥಾನಕ್ಕೆ ಬದಲಿಸಿ, ಗುಂಡಿ ಬಿದ್ದಲ್ಲಿ ಮಣ್ಣು ತುಂಬಿಸಲಾಗುತ್ತಿದೆ. ಕುಕ್ಕಾವು, ಚಾರ್ಮಾಡಿ, ನೆರಿಯ ಮತ್ತಿತರ ಕಡೆ ರಸ್ತೆ ಮೇಲೆ ಬಿದ್ದ ಕೆಸರು ಮಣ್ಣು ತೆರವು ಕಾರ್ಯವೂ ನಡೆಯುತ್ತಿದೆ.
ಕಕ್ಕಿಂಜೆ ಸಮೀಪದ ಅನಾರು ಸೇತುವೆ ಬಳಿ ನೀರಿನ ಮಟ್ಟ ಹೆಚ್ಚಿರು ವುದರಿಂದ ಎನ್ಡಿಆರ್ಎಫ್ ತಂಡ ಮುಂಬೈನಿಂದ ತಂದ ಬೃಹತ್ ಡ್ರಮ್ ಗಳನ್ನು ಬಳಸಿ ನೀರಿನ ಮೇಲೆ ಸಂಪರ್ಕ ವ್ಯವಸ್ಥೆ ಕಲ್ಪಿಸಿದೆ. ಬಾಂಜಾರುಮಲೆ ಪ್ರದೇಶಕ್ಕೆ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿ, ಸಂಪರ್ಕ ಕಲ್ಪಿಸಲಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದ್ದು, ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯವರು 8 ಕ್ಕೂ ಹೆಚ್ಚು ಜೆಸಿಬಿಗಳನ್ನು ಬಳಸಿ, ಹೊಸ ರಸ್ತೆ ನಿರ್ಮಾಣ, ಹಲವೆಡೆ ದುರಸ್ತಿ, ಬಂಡೆ ತೆರವು ಕಾರ್ಯಗಳನ್ನು ಕೈಗೆತ್ತಿಕೊಂಡಿ ದ್ದಾರೆ.
ಪರಿಣಾಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 7,678 ವಿದ್ಯುತ್ ಕಂಬ ಮುರಿದು ಬಿದ್ದಿವೆ. 716 ವಿದ್ಯುತ್ ಪರಿವರ್ತಕಗಳು ಹಾನಿಗೀಡಾಗಿವೆ. 285 ಕಿ.ಮೀ. ಉದ್ದದ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದ್ದು, ಉಭಯ ಜಿಲ್ಲೆಗಳಲ್ಲಿ ಮೆಸ್ಕಾಂಗೆ ₹11 ಕೋಟಿ ನಷ್ಟ ಉಂಟಾಗಿದೆ.
ಸಾಧಾರಣ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶುಕ್ರವಾರ ಸಾಧಾ ರಣ ಮಳೆಯಾಗಿದೆ. ಚಿಕ್ಕ ಮಗಳೂರು ಜಿಲ್ಲೆಯಲ್ಲೂ ತುಂತುರು ಮಳೆ ಸುರಿದಿದೆ.