ಬೆಳ್ತಂಗಡಿ: ತಾಲ್ಲೂಕಿನ ಅಳದಂಗಡಿಯ ಕೆದ್ದುವಿನ ಮನೆಯೊಂದರ ಸ್ನಾನಗೃಹದಲ್ಲಿ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಅದನ್ನು ಸ್ನೇಕ್ ಅಶೋಕ್ ರಕ್ಷಣೆ ಮಾಡಿ, ಕಾಡಿಗೆ ಬಿಟ್ಟಿದ್ದಾರೆ.
ಕೆದ್ದು ನಿವಾಸಿ ಗೋಪಾಲಕೃಷ್ಣ ಭಟ್ ಅವರ ಜಿ.ಕೆ.ಫಾರ್ಮ್ಸ್ ಮನೆಯ ಸ್ನಾನ ಗೃಹದಲ್ಲಿ ಗುರುವಾರ ಬೆಳಿಗ್ಗೆ ಈ ಹಾವು ಕಾಣಿಸಿಕೊಂಡಿದೆ.
ಮನೆಯ ಸದಸ್ಯರು ಮುಖ ತೊಳೆಯಲು ಹೋದಾಗ ಒಳಗಡೆಯಿಂದ ಶಬ್ದ ಕೇಳಿಸಿದ್ದು, ಅತಂಕದಿಂದ ಹೊರಗಡೆ ಓಡಿ ಬಂದಿದ್ದಾರೆ. ನಂತರ ಪರಿಶೀಲನೆ ನಡೆಸಿದಾಗ ಕಾಳಿಂಗ ಸರ್ಪ ಕಂಡಿದೆ. ತಕ್ಷಣ ಲಾಯಿಲ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ, ಮಾಹಿತಿ ತಿಳಿಸಿ ಮನೆಗೆ ಕರೆಸಿದ್ದಾರೆ.
ಹಾವನ್ನು ಬಾಲದ ಮೂಲಕ ಹಿಡಿಯಲು ಯತ್ನಿಸಿದಾಗ ಸ್ನೇಕ್ ಅಶೋಕ್ ಮೇಲೆಯೇ ದಾಳಿಗೆ ಮುಂದಾಗಿದೆ. ಆಗ ಅವರು ತನ್ನಲ್ಲಿದ್ದ ರಕ್ಷಣಾ ಕೋಲು ಎಸೆದು, ಹಿಂದಕ್ಕೆ ಸರಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ನಂತರ ಕಾಳಿಂಗವನ್ನು ಹೊರಗಡೆ ತಂದು ಗೋಣಿಚೀಲಕ್ಕೆ ಹಾಕಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.