ಮಂಗಳೂರು: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕೋಡಿಕಲ್ ಶಾಖೆ ಮತ್ತು ಗಣೇಶೋತ್ಸವ ಸಮಿತಿ ವತಿಯಿಂದ ಇದೇ 31ರಿಂದ ಮೂರು ದಿನಗಳ ಕಾಲ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಏರ್ಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಸಮಿತಿಯ ಸಾಂಸ್ಕೃತಿಕ ಕಾರ್ಯದರ್ಶಿ ರವಿ ಅಲೆವೂರಾಯ, ‘ಕೋವಿಡ್ನಿಂದಾಗಿ ಎರಡು ವರ್ಷಗಳಿಂದ ಗಣೇಶೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದೇವೆ’ ಎಂದರು.
‘ಇದೇ 21ರಂದು ಭಾನುವಾರ ಕೋಡಿಕಲ್ ಶಾಲೆಯಲ್ಲಿ ಬೆಳಿಗ್ಗೆ 9ರಿಂದ ಸಾರ್ವಜನಿಕರಿಗಾಗಿ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಇದೇ 31ರಂದು ಬೆಳಿಗ್ಗೆ 9ಕ್ಕೆ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ ನೆರವೇರಲಿದೆ. 10.30ಕ್ಕೆ ಮಹಾಗಣಪತಿ ಹೋಮ ನಡೆಯಲಿದೆ. ಸಂಜೆ 6ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಾಂತ ಗೋಸೇವಾ ಸಂಯೋಜಕ ಪ್ರವೀಣ ಸರಳಾಯ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 9ರಿಂದ ಕೋಡಿಕಲ್ನ ಸರಯೂ ಬಾಲಯಕ್ಷ ವೃಂದದವರು ಗಣಪತಿ ಮಹಿಮೆ ಯಕ್ಷಗಾನ ಪ್ರದರ್ಶಿಸಲಿದ್ದಾರೆ’ ಎಂದರು.
‘ಸೆ. 1ರಂದು ಬೆಳಿಗ್ಗೆ 9ಕ್ಕೆ 128 ತೆಂಗಿನಕಾಯಿ ಗನಪತಿ ಹೋಮ ನಡೆಯಲಿದೆ. ಸಂಜೆ 5ರಿಂದ ಸ್ಥಳೀಯ ಮಕ್ಕಳಿಂದ ಪ್ರತಿಭಾ ಪ್ರದರ್ಶನ, ಸಂಜೆ 6ರಿಂದ ಆರ್ಎಸ್ಎಸ್ ಕರ್ನಾಟಕ ಪ್ರಾಂತ ಸಂಘ ಚಾಲಕ ಡಾ.ಪಿ.ವಾಮನ ಶೆಣೈ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ರಾತ್ರಿ 9ರಿಂದ ಕೋಡಿಕಲ್ನ ನಾಗಬ್ರಹ್ಮ ಯಕ್ಷವೃಂದದವರು ‘ಹಿರಾಣ್ಯಾಕ್ಷ ವಧೆ– ಭಾರ್ಗವ ವಿಜಯ’ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಸೆ. 2ರಂದು ಸಂಜೆ 6.30ಕ್ಕೆ ಶೋಭಾ ಯಾತ್ರೆ ನಡೆಯಲಿದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕಿರಣ್ ಜೋಗಿ, ಉಪಾಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಪಾಲಿಕೆ ಸದಸ್ಯ ಮನೋಜ್ ಕುಮಾರ್, ಕಾರ್ಯದರ್ಶಿ ಸತೀಶ್ ಶೆಟ್ಟಿ ಇದ್ದರು.