ಮಂಗಳೂರು: ತೀವ್ರ ಅಸ್ವಸ್ಥಗೊಂಡಿದ್ದ ಕೊಣಾಜೆಯ ಕೆಎಸ್ಆರ್ಪಿ ಏಳನೇ ಬೆಟಾಲಿಯನ್ನಲ್ಲಿ ಕಾನ್ಸ್ಟೆಬಲ್ ಆಗಿ ಕೆಲಸ ನಿರ್ವಹಿಸುತ್ತಿರುವ ರವಿ ರೈ ಅವರ ಪ್ರಾಣ ರಕ್ಷಣೆಗಾಗಿ ರಾತ್ರಿಯೇ ಬೆಂಗಳೂರಿನಿಂದ ಪ್ಲಾಸ್ಲಾ ತಂದು ಚಿಕಿತ್ಸೆ ನೀಡಲಾಗಿದೆ.
ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ರೈ ಅವರಿಗೆ ತೀವ್ರ ಜ್ವರವಿತ್ತು. ಅವರನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಗೆ ಕೋವಿಡ್–19 ದೃಢಪಟ್ಟಿತ್ತು. ಮೂತ್ರಪಿಂಡ ಮತ್ತು ಲಿವರ್ ಹಾನಿಗೊಳಗಾದ ಕಾರಣ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದರು.
ಪ್ಲಾಸ್ಮಾ ದೊರೆತರೆ ಕಾನ್ಸ್ಟೆಬಲ್ ಅವರನ್ನು ರಕ್ಷಣೆ ಮಾಡಬಹುದು ಎಂದು ವೈದ್ಯರು ಹೇಳಿದ್ದು, ಕೂಡಲೇ ಕೆಎಸ್ಆರ್ಪಿ ಕಮಾಂಡೆಂಟ್ ಯುವಕುಮಾರ್ ಅವರು, ಬೆಂಗಳೂರಿನ ಕೆಎಸ್ಆರ್ಪಿ ಹೆಚ್ಚುವರಿ ಮಹಾನಿರ್ದೇಶಕರಿಗೆ ಈ ವಿಷಯ ತಿಳಿಸಿದರು.
ಕೂಡಲೇ ಕಾರ್ಯಪ್ರವೃತ್ತರಾಗಿದ ಎಡಿಜಿಪಿ, ಕೆಎಸ್ಆರ್ಪಿ ನಾಲ್ಕನೇ ಬೆಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿರುವ ರಾಜು ಕೊಲ್ಹಾಪುರಿ ಅವರನ್ನು ಸಂಪರ್ಕಿಸಿದರು. ಅವರು ತಮ್ಮ ಪ್ಲಾಸ್ಮಾ ದಾನ ಮಾಡಿದ್ದಾರೆ. ರಾತ್ರಿಯೇ ಬೆಂಗಳೂರಿನಲ್ಲಿ ಸಂಗ್ರಹಿಸಿದ ಈ ಪ್ಲಾಸ್ಮಾವನ್ನು ಕೆಲವೇ ಗಂಟೆಗಳಲ್ಲಿ ಮಂಗಳೂರಿಗೆ ತರಲಾಯಿತು.
ರವಿ ರೈ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ‘ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದ್ದರಿಂದ ನಾನು ಬದುಕುಳಿಯುತ್ತಿರಲಿಲ್ಲ. ಹಲವಾರು ಜನರ ಪ್ರಯತ್ನದಿಂದ ಇಂದು ನಾನು ಬದುಕಿದ್ದೇನೆ’ ಎಂದು ರವಿ ರೈ ಹೇಳಿದ್ದಾರೆ.