ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ, ಧರ್ಮಸ್ಥಳದಲ್ಲಿ ನಾಳೆಯಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ

Last Updated 4 ಜುಲೈ 2021, 13:21 IST
ಅಕ್ಷರ ಗಾತ್ರ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇದೇ 5ರಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ದೇವರ ದರ್ಶನ, ಮಂಗಳಾರತಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ತಿಳಿಸಿದ್ದಾರೆ.

ಎಲ್ಲಾ ಭಕ್ತರಿಗೆ ಬೆಳಿಗ್ಗೆ 7ರಿಂದ 11.30ರ ತನಕ, ಮಧ್ಯಾಹ್ನ 12.15ರಿಂದ 1.30 ತನಕ, ನಂತರ 2.30ಯಿಂದ ಸಂಜೆ 6.30 ತನಕ ಭಕ್ತರು ದೇವರ ದರ್ಶನ ಮಾಡಬಹುದು. ಮಂಗಳಾರತಿ ಸೇವೆಗೆ ಮಾತ್ರ ಅವಕಾಶವಿರುವುದರಿಂದ ಪ್ರತಿ 15 ನಿಮಿಷಕ್ಕೊಮ್ಮೆ ದೇವರಿಗೆ ಮಂಗಳಾರತಿ ನಡೆಯಲಿದೆ. ಮಂಗಳಾರತಿಗೆ ಯಾವುದೇ ಪ್ರಸಾದ ನೀಡಲಾಗುವುದಿಲ್ಲ. ದೇವಳದ ವಸತಿ ಗೃಹದಲ್ಲಿ ತಂಗಲು ಅವಕಾಶವಿಲ್ಲ. ಗಂಧ ಪ್ರಸಾದ, ತೀರ್ಥ ಪ್ರಸಾದ, ಮೂಲಮೃತ್ತಿಕೆ ಪ್ರಸಾದ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಭಕ್ತರಿಗೆ ಭೋಜನ ಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಪಂಚಕಜ್ಜಾಯ, ಲಡ್ಡುಪ್ರಸಾದ ವಿತರಣೆಯಾಗುದಿಲ್ಲ. ದೇವಳದ ಮುಂಭಾಗದಲ್ಲಿ ಕಡ್ಡಾಯವಾಗಿ ಥರ್ಮಾಮೀಟರ್‌ನಿಂದ ಉಷ್ಣತೆ ತಪಾಸಣೆ ಮಾಡಲಾಗುವುದು. ಅಲ್ಲದೆ, ಒಳಪ್ರವೇಶಿಸುವಾಗ ಸ್ಯಾನಿಟೈಸರ್ ನೀಡಲಾಗುವುದು. ಜ್ವರ, ಕೆಮ್ಮು, ಶೀತವಿರುವ ಭಕ್ತರಿಗೆ ಪ್ರವೇಶಕ್ಕೆ ಅವಕಾಶವಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಅಂತರ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

ದೇವಳಕ್ಕೆ ರಾಜಗೋಪುರದ ಪ್ರಧಾನ ದ್ವಾರದ ಮೂಲಕ ಮಾತ್ರ ಪ್ರವೇಶಾವಕಾಶ ನೀಡಲಾಗುತ್ತದೆ. ಪ್ರಧಾನ ದ್ವಾರದ ಬಳಿಕ ಹೊರಾಂಗಣ ಮತ್ತು ಒಳಾಂಗಣಕ್ಕೆ ಪ್ರವೇಶಿಸುವಾಗ ಅಂತರ ಕಾಯ್ದುಕೊಳ್ಳಲು ಚೌಕವನ್ನು ಬರೆಯಲಾಗಿದೆ. ದೇವಳದ ಹೊರಾಂಗಣ, ಒಳಾಂಗಣ ಸೇರಿದಂತೆ ದೇವಳದ ಸುತ್ತಲೂ ಚೌಕವನ್ನು ಹಾಕಲಾಗಿದೆ. ಭಕ್ತರು ಈ ಚೌಕದ ಮೂಲಕ ಸರದಿ ಸಾಲಿನಲ್ಲಿ ಮುಂದಡಿಯಿಡಬೇಕು. ದೇವಳದ ಪ್ರವೇಶದಿಂದ ಹೊರ ಬರುವ ತನಕವೂ ಭಕ್ತರು ಚೌಕದಲ್ಲಿ ಮುನ್ನಡೆಯಬೇಕು. ಆದಿ ಸುಬ್ರಹ್ಮಣ್ಯ ದೇವಸ್ಥಾನ ಪ್ರವೇಶಿಸುವಾಗಲೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ಹೇಳಿದ್ದಾರೆ.
ಸಿಬ್ಬಂದಿಯೊಂದಿಗೆ ಸಮಾಲೋಚನೆ: ದೇವಳವು ಭಕ್ತರ ದರ್ಶನಕ್ಕೆ ತೆರೆಯುವ ಪ್ರಯುಕ್ತ ದೇವಳದ ಸಿಬ್ಬಂದಿಯೊಂದಿಗೆ ಸಮಾಲೋಚನಾ ಸಭೆಯು ಭಾನುವಾರ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ ನಡೆಯಿತು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ಮಾರ್ಗದರ್ಶನ ನೀಡಿದರು.

ಧರ್ಮಸ್ಥಳ: ದೇವರ ದರ್ಶನ ನಾಳೆಯಿಂದ

ಧರ್ಮಸ್ಥಳದಲ್ಲಿ ಇದೇ 5ರಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಳಿಗ್ಗೆ 6ರಿಂದ 11 ರವರೆಗೆ, ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ, ಸಂಜೆ 7ರಿಂದ 8.30 ವರೆಗೆ ದರ್ಶನಕ್ಕೆ ಅವಕಾಶವಿದೆ.

ಸರ್ಕಾರದ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ದೇವರ ದರ್ಶನಕ್ಕೆ ಅವಕಾಶವಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸೇಷನ್, ಅಂತರ ಕಾಪಾಡುವುದು ಕಡ್ಡಾಯಗೊಳಿಸಲಾಗಿದೆ.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗುವವರು ದೇವಸ್ಥಾನದ ಬಳಿ ಇರುವ ಪ್ರವಚನ ಮಂಟಪದಲ್ಲಿ ಹೆಸರು ನೋಂದಾಯಿಸಬೇಕು. ಹೆಗ್ಗಡೆಯವರ ಭೇಟಿಯ ಸಮಯ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರ ವರೆಗೆ, ಸಂಜೆ 4 ಗಂಟೆಯಿಂದ 5ರವರೆಗೆ. ವಸತಿ ಸೌಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ದೇವಳ ಕಚೇರಿ: 08256- 266666/ 9449567232 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT