ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಠಿ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾನುವಾರ ರಾತ್ರಿ ಭಕ್ತಿ ಭಾವ ಸಂಭ್ರಮ ಹಾಗೂ ಸಾಹಿತ್ಯ ನೃತ್ಯ ಕಾರ್ಯಕ್ರಮಗಳು ನಡೆಯಿತು.
ಸುಮಾ ಕೋಟೆ ಅವರಿಂದ ಭಕ್ತಿ- ಭಾವ- ಸಂಭ್ರಮ ಕಾರ್ಯಕ್ರಮ ಹಾಗೂ ಸುಳ್ಯ ಕನಕ ಕಲಾ ಗ್ರಾಮ ಕಲಾತಂಡ, ಮಂಡ್ಯ ಗುರುದೇವಾ ಲಲಿತಾ ಕಲಾ ಅಕಾಡೆಮಿಯಿಂದ ಶಾಸ್ತ್ರೀಯ ವೈವಿಧ್ಯ ನೃತ್ಯ ಕಲಾ ಪ್ರಕಾರಗಳ ಪ್ರದರ್ಶನ ಡಾ.ಚೇತನ ರಾಧಾಕೃಷ್ಣ ಪಿ.ಎಂ. ಅವರ ಕಲಾ ನಿರ್ದೇಶನದಲ್ಲಿ ನಡೆಯಿತು.
ಇಂದು ಕೇಂದ್ರ ಸಚಿವೆ ಭೇಟಿ: ಡಿ.27ರಂದು ಬೆಳಿಗ್ಗೆ 9.30ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಭೇಟಿ ನೀಡಿಲಿದ್ದಾರೆ. ಬೆಳಿಗ್ಗೆ 11ರಿಂದ 11.45ರ ವರೆಗೆ ಕಿರುಷಷ್ಠಿ ವೇದಿಕೆಯಲ್ಲಿ ಸುಬ್ರಹ್ಮಣ್ಯದ ಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ ಮಹಾ ಪೂಜೆಯಲ್ಲಿ ಭಾಗವಹಿಸುವರು.
ಡಿ.27ರಂದು ಸಂಜೆ 5ರಿಂದ ಕಡಬದ ವಿಶ್ವ ಮೋಹನ ನೃತ್ಯ ಕಲಾ ಶಾಲೆ ವಿದ್ಯಾರ್ಥಿಗಳಿಂದ ಮಾನಸ ಪುನೀತ್ ರೈ ನಿರ್ದೇಶನದಲ್ಲಿ ನೃತ್ಯ ವೈಭವ ಹಾಗೂ ಸಂಜೆ 7ರಿಂದ ಕೂಳೂರು ಜಯಚಂದ್ರ ರಾವ್, ಸಿದ್ಧಾರ್ಥ ಬೆಳ್ಮಣ್ಣು, ನಿತಿಶ್ ಅಮ್ಮಣ್ಣಾಯ, ಅರುಣ್ ಕುಮಾರ್ ತಂಡದಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.