ಪುತ್ತೂರು: ತಾಲ್ಲೂಕಿನ ಮುಂಡೂರು ಗ್ರಾಮದ ಕಂಪ ಎಂಬಲ್ಲಿ ಮಂಗಳ ವಾರ ಯುವತಿಯೊಬ್ಬರನ್ನು ಚೂರಿ ಯಿಂದ ಇರಿದು ಹತ್ಯೆ ಮಾಡಿದ ಭಗ್ನ ಪ್ರೇಮಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಮುಂಡೂರು ಗ್ರಾಮದ ಕಂಪ ನಿವಾಸಿ ಜಯಶ್ರೀ (23) ಅವರನ್ನು ಸುಳ್ಯ ತಾಲ್ಲೂಕಿನ ಕನಕಮಜಲು ಗ್ರಾಮದ ಮುಗೇರು ನಿವಾಸಿ ಅಂಗಾರ ಅವರ ಪುತ್ರ ಉಮೇಶ್ (24) ಕೊಲೆ ಮಾಡಿದ್ದ.
ಎಸ್ಪಿ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಎಸ್ಪಿ ಧರ್ಮಪ್ಪ ಎನ್.ಎಂ, ಪುತ್ತೂರು ಡಿವೈಎಸ್ಪಿ ವೀರಯ್ಯ ಹಿರೇಮಠ್ ಅವರ ಮಾರ್ಗದರ್ಶನದಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಪುತ್ತೂರು ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ರವಿ.ಬಿ.ಎಸ್ ಮತ್ತು ಸಂಪ್ಯ ಎಸ್ಐ ಉದಯರವಿ ಎಂ.ವೈ ನೇತೃತ್ವದ ತಂಡ ಆರೋಪಿ ಉಮೇಶನನ್ನು ಬಂಧಿಸಿ, ಕೊಲೆಗೆ ಬಳಸಿದ ಚೂರಿ ಮತ್ತು ಸ್ಥಳಕ್ಕೆ ಬರಲು ಬಳಸಿದ ಆ್ಯಕ್ಟಿವಾ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ.