ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: 'ಬರಿಯ ಆಡಂಬರದಿಂದ ಭಾಷೆ ಉಳಿಸಲಾಗದು'

ಎಸ್‌.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವೇಕರೈ ಅಭಿಮತ
Last Updated 9 ಫೆಬ್ರುವರಿ 2023, 6:04 IST
ಅಕ್ಷರ ಗಾತ್ರ

ಮಂಗಳೂರು: ‘ಪಕ್ಷ, ಪಂಥಗಳಿಂದ ಹೊರಬರದಿದ್ದರೆ ಭಾಷೆ ಬೆಳೆಯುವುದಿಲ್ಲ, ‘ಕನ್ನಡದ ಪ್ರೀತಿ’ಯು ಪ್ರದರ್ಶನವಾಗಿ ಉಳಿಯಬಾರದು, ಅದು ಬದುಕಿನ ಭಾಗವಾಗಬೇಕು’ ಎಂದು ವಿದ್ವಾಂಸ, ಎಸ್‌.ವಿ. ಪರಮೇಶ್ವರ ಭಟ್ಟ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಬಿ.ಎ. ವಿವೇಕ ರೈ ಹೇಳಿದರು.

ಪರಮೇಶ್ವರ ಭಟ್ಟ ಪ್ರತಿಷ್ಠಾನ ಕೊಡಮಾಡುವ 2022ನೇ ಸಾಲಿನ ಎಸ್‌.ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿಯನ್ನು ಡಾ. ತಾಳ್ತಜೆ ವಸಂತ ಕುಮಾರ್‌ ಅವರಿಗೆ ಹಾಗೂ 2023ನೇ ಸಾಲಿನ ಪ್ರಶಸ್ತಿಯನ್ನು ಡಾ. ಒ.ಎಲ್‌. ನಾಗಭೂಷಣಸ್ವಾಮಿ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.

ಪರಮೇಶ್ವರ ಭಟ್ಟ ಪ್ರತಿಷ್ಠಾನ, ಸೇಂಟ್‌ ಅಲೋಶಿಯಸ್‌ ಕಾಲೇಜಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಭಾಷೆ, ಕಲೆ– ಸಂಸ್ಕೃತಿ ಇಂದು ‘ಈವೆಂಟ್‌ ಮ್ಯಾನೇಜ್‌ಮೆಂಟ್‌’ನಂತಾಗಿ ಆಡಂಬರಕ್ಕೆ ಸೀಮಿತವಾಗುತ್ತಿವೆ. ಆಡಂಬರ ಉಳಿದು, ಒಳಗಿನ ಗಟ್ಟಿತನ ಕಳೆದುಕೊಂಡರೆ ಭಾಷೆ, ಸಂಸ್ಕೃತಿಯನ್ನು ಉಳಿಸಲಾಗದು. ನಮ್ಮ ಸಾಹಿತ್ಯವು ಇತರ ಭಾಷೆಗಳಿಗೆ, ವಿಶೇಷವಾಗಿ ಇಂಗ್ಲಿಷ್‌ಗೆ ಹೆಚ್ಚು ಹೆಚ್ಚು ಭಾಷಾಂತರವಾಗಬೇಕು. ಅದಕ್ಕಾಗಿ ಕನಿಷ್ಠ 50 ಮಂದಿ ಯುವ ಭಾಷಾಂತರಕಾರರನ್ನು ನಾವು ತಯಾರಿಸಬೇಕಾಗಿದೆ. ಎಲ್ಲಿಂದಲೋ ಅನುದಾನ, ಸರ್ಕಾರಗಳನ್ನು ನೆಚ್ಚಿಕೊಂಡು ಕುಳಿತರೆ ಸಧ್ಯವಾಗದು, ನಮ್ಮನಮ್ಮ ಮಟ್ಟದಲ್ಲಿ ಎಲ್ಲರೂ ಕೆಲಸ ಮಾಡಬೇಕು’ ಎಂದು.

ಸೇಂಟ್‌ ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲ ಫಾ. ಪ್ರವೀಣ್‌ ಮಾರ್ಟಿಸ್‌ ಹಾಗೂ ಎಸ್‌.ವಿ ಪರಮೇಶ್ವರ ಭಟ್ಟ ಅವರ ಪುತ್ರ ಎಸ್‌.ಪಿ. ರಾಮಚಂದ್ರ ಮಾತನಾಡಿದರು.

ಡಾ. ತಾಳ್ತಜೆ ಅವರ ಬಗ್ಗೆ ಪ್ರೊ. ಚಿನ್ನಪ್ಪಗೌಡ ಹಾಗೂ ನಾಗಭೂಷಣಸ್ವಾಮಿ ಅವರ ಬಗ್ಗೆ ಸತ್ಯನಾರಾಯಣ ಮಲ್ಲಿಪಟ್ಟಣ ಅವರು ಅಭಿನಂದನಾ ನುಡಿಗಳನ್ನಾಡಿದರು.

ಜಯಲಕ್ಷ್ಮಿ ಶಾಸ್ತ್ರಿ, ರಶ್ಮಿ ಅರಸ್‌, ಹಾಗೂ ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಬಳಗದವರು ಎಸ್‌ವಿಪಿ ಅವರ ಗೀತೆಗಳನ್ನು ಹಾಡಿದರು. ಡಾ. ನಾ. ದಾಮೋದರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರಸಿಂಹಮೂರ್ತಿ ಅವರು ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT