ಮೂಡುಬಿದಿರೆ: ಕಾಂತಾವರ ಗ್ರಾಮದ ಕೇಪ್ಲಾಜೆ ಕೂಡು ರಸ್ತೆ ಬಳಿ ಉರುಳಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೋಮವಾರ ರಕ್ಷಿಸಿದ್ದಾರೆ.
ಕಾಡು ಪ್ರಾಣಿ ಬೇಟೆಗೆ ಇರಿಸಿದ್ದ ಉರುಳಿಗೆ ಚಿರತೆ ಸಿಕ್ಕಿ ಬಿದ್ದಿತ್ತು. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪಿಲಿಕುಳ ನಿಸರ್ಗಧಾಮದ ಜಯಪ್ರಕಾಶ್ ಭಂಡಾರಿ ಅರಿವಳಿಕೆ ನೀಡಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆಯನ್ನು ಉರುಳಿನಿಂದ ಬಿಡಿಸಿದರು.
ಉರುಳಿಗೆ ಬಿದ್ದಿರುವ ಚಿರತೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮೂಡುಬಿದಿರೆ ಅರಣ್ಯ ಇಲಾಖೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಪೂಜಾರಿ ತಿಳಿಸಿದ್ದಾರೆ.
ಉಪವಲಯಾರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಅರಣ್ಯ ರಕ್ಷಕ ವಿನಾಯಕ ಹಾಗೂ ಅರಣ್ಯ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು.