ಬಂಟ್ವಾಳ: ಕಳೆದ 66 ವರ್ಷಗಳಲ್ಲಿ ದೇಶದ ಅತಿ ದೊಡ್ಡ ಆರ್ಥಿಕ ಸಂಸ್ಥೆಯಾಗಿ ರೂಪುಗೊಂಡಿರುವ ಭಾರತೀಯ ಜೀವ ವಿಮಾ ನಿಗಮವು ಜನರಲ್ಲಿ ಉಳಿತಾಯ ಮನೋಭಾವ ಮೂಡಿಸಿ ಅವರ ಬದುಕಿಗೆ ಭದ್ರತೆ ಒದಗಿಸುವುದರ ಜೊತೆ ವಿವಿಧ ಮೂಲಸೌಕರ್ಯಗಳಿಗೆ ನೆರವು ನೀಡಿ ದೇಶದ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಎಲ್ಐಸಿ ಉಡುಪಿ ಹಿರಿಯ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮುಧೋಳ್ ಹೇಳಿದರು.
ಇಲ್ಲಿನ ಬಿ.ಸಿ.ರೋಡು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ಭಾರತೀಯ ಜೀವ ವಿಮಾ ನಿಗಮ ಶಾಖೆಯ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ನೇತೃತ್ವದ ಪ್ರತಿನಿಧಿಗಳ ತಂಡದ 23ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ಮುಖ್ಯ ಶಾಖಾಧಿಕಾರಿ ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ವಿಭಾಗೀಯ ವ್ಯವಸ್ಥಾಪಕಿ ಶಶಿಕಲಾ ಕೋಟ್ಯಾನ್, ಬಂಟ್ವಾಳ ಸಹಾಯಕ ಶಾಖಾಧಿಕಾರಿ ಕೃಪಾಲ್ ಎಚ್, ತಂಡದ ಸಂಚಾಲಕ ಗುಣಪಾಲ್ ಪರಾಡ್ಕರ್ ಇದ್ದರು.
ಪ್ರತಿನಿಧಿಗಳಿಗೆ ಸನ್ಮಾನ, ರಸಪ್ರಶ್ನೆ ಮತ್ತು ವಿವಿಧ ಸಾಂಸ್ಕೃತಿಕ ಸರ್ಧೆ ನಡೆಯಿತು. ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಕಲ್ಮಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಶೊಧರ ಗೌಡ ವಂದಿಸಿದರು. ಶಿಕ್ಷಕಿ ಸಬಿತಾ ಲವಿನಾ ಪಿಂಟೊ ಮತ್ತು ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ನಿರೂಪಿಸಿದರು.