ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನೈಡ್‌ ಮೋಹನ್‌ಗೆ ಜೀವಾವಧಿ ಶಿಕ್ಷೆ

19ನೇ ಯುವತಿಯ ಕೊಲೆ ಪ್ರಕರಣದಲ್ಲೂ ಅಪರಾಧಿ
Last Updated 17 ಫೆಬ್ರುವರಿ 2020, 15:10 IST
ಅಕ್ಷರ ಗಾತ್ರ

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯ ಕೊಳ್ತಾಜೆಪಾದೆ ಗ್ರಾಮದ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಸೈನೈಡ್‌ ನೀಡಿ ಕೊಲೆ ಮಾಡಿದ ಪ್ರಕರಣದಲ್ಲಿ ಸರಣಿ ಹಂತಕ ಮೋಹನ್‌ ಕುಮಾರ್‌ ಅಲಿಯಾಸ್‌ ಸೈನೈಡ್‌ ಮೋಹನ್‌ಗೆ ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹ 55,000 ದಂಡ ವಿಧಿಸಿದೆ.

ಒಟ್ಟು 20 ಯುವತಿಯರನ್ನು ಮದುವೆ ಆಗುವುದಾಗಿ ನಂಬಿಸಿ, ಅವರ ಮೇಲೆ ಅತ್ಯಾಚಾರ ಎಸಗಿದ ಬಳಿಕ ಸೈನೈಡ್‌ ನೀಡಿ ಕೊಲೆ ಮಾಡಿದ ಆರೋಪ ಮೋಹನ್‌ ಮೇಲಿದೆ. ಈ ಪೈಕಿ 19 ಪ್ರಕರಣಗಳ ವಿಚಾರಣೆ ಮುಗಿದು, ನ್ಯಾಯಾಲಯದ ತೀರ್ಮಾನ ಪ್ರಕಟವಾಗಿದೆ. ಇದು ಸೈನೈಡ್‌ ಮೋಹನ್‌ ಜೀವಾವಧಿ ಶಿಕ್ಷೆಗೊಳಗಾಗಿರುವ 15ನೇ ಪ್ರಕರಣ. ನಾಲ್ಕು ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿದೆ.

ಕೊಳ್ತಾಜೆಪಾದೆ ನಿವಾಸಿಯಾಗಿದ್ದ ಯುವತಿಯ ಕೊಲೆ ಪ್ರಕರಣದಲ್ಲಿ ಮೋಹನ್‌ ಅಪರಾಧಿ ಎಂದು ನ್ಯಾಯಾಲಯ ಫೆಬ್ರುವರಿ 11ರಂದು ತೀರ್ಮಾನ ಪ್ರಕಟಿಸಿತ್ತು. ನ್ಯಾಯಾಧೀಶೆ ಸಯೀದುನ್ನೀಸಾ ಅವರು ಸೋಮವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

ಕೊಲೆ, ಅಪಹರಣ, ಅತ್ಯಾಚಾರ, ಕೊಲೆಯ ಉದ್ದೇಶದಿಂದ ವಿಷಪ್ರಾಶನ, ಚಿನ್ನಾಭರಣ ಸುಲಿಗೆ, ವಂಚನೆ ಹಾಗೂ ಸಾಕ್ಷ್ಯನಾಶ ಮಾಡಿದ ಅಪರಾಧಗಳಿಗಾಗಿ ಮೋಹನ್‌ಗೆ ವಿವಿಧ ಪ್ರಮಾಣದ ಶಿಕ್ಷೆಗಳನ್ನು ವಿಧಿಸಲಾಗಿದೆ.

ಮದುವೆಯ ಆಮಿಷ: ಬೀಡಿ ಕಟ್ಟುತ್ತಿದ್ದ ಮೃತ ಯುವತಿ 2006ರಲ್ಲಿ ಸಂಬಂಧಿಯೊಬ್ಬರ ಮದುವೆಗೆ ಹೋಗಿದ್ದಾಗ ಮೋಹನ್‌ ಪರಚಿಯವಾಗಿತ್ತು. ಶಿಕ್ಷಕ ಎಂದು ಪರಿಚಯಿಸಿಕೊಂಡಿದ್ದ ಅಪರಾಧಿ, ಯುವತಿಯನ್ನು ಮದುವೆ ಆಗುವುದಾಗಿ ಆಮಿಷವೊಡ್ಡಿದ್ದ.

ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ನೆಪದಲ್ಲಿ 2006ರ ಜೂನ್‌ 3ರಂದು ಯುವತಿಯನ್ನು ಪುತ್ತೂರಿಗೆ ಕರೆಸಿಕೊಂಡಿದ್ದ. ಅಲ್ಲಿಂದ ಮೈಸೂರಿಗೆ ಹೋಗಿ ಆಕೆಯೊಂದಿಗೆ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಅಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದ. ಮರುದಿನ ಬೆಳಿಗ್ಗೆ ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕರೆದೊಯ್ದು ಗರ್ಭಪಾತದ ಮಾತ್ರೆ ಎಂದು ನಂಬಿಸಿ ಸೈನೈಡ್‌ ನೀಡಿದ್ದ.

ಸೈನೈಡ್‌ ಸೇವಿಸಿದ್ದ ಯುವತಿ ಕುಸಿದು ಬಿದ್ದಿದ್ದಳು. ಅದನ್ನು ಕಂಡ ಬಸವರಾಜ್‌ ಎಂಬ ಪೊಲೀಸ್‌ ಸಿಬ್ಬಂದಿ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲಾಗಲೇ ಯುವತಿ ಮೃತಪಟ್ಟಿದ್ದಳು. 2009ರಲ್ಲಿ ಮೋಹನ್‌ ಬಂಧನದ ಬಳಿಕ ಕೊಳ್ತಾಜೆಪಾದೆಯ ಯುವತಿಯ ಕೊಲೆ ಪ್ರಕರಣವೂ ಬಯಲಿಗೆ ಬಂದಿತ್ತು.

48 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, 70 ಸಾಕ್ಷ್ಯಗಳನ್ನು ಪರಿಶೀಲಿಸಿದ ಬಳಿಕ ಮೋಹನ್‌ ಅಪರಾಧಿ ಎಂಬ ತೀರ್ಮಾನ ಪ್ರಕಟಿಸಿದೆ. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಜುಡಿತ್‌ ಒ.ಎಂ. ಕ್ರಾಸ್ತಾ ಅವರು ಮೊದಲು ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರ ವಾದ ಮಂಡಿಸಿದ್ದರು. ಅಂತಿಮ ಹಂತದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT