ಮೂಲ್ಕಿ (ಮಂಗಳೂರು): ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ, ಉಳಿದ ಆರೋಪಿಗಳನ್ನು ಬಂಧಿಸಲು ಕರೆದೊಯ್ಯುತ್ತಿದ್ದ ವೇಳೆ ಪಣಂಬೂರು ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಇತ್ತೀಚೆಗೆ ಬೈಕಂಪಾಡಿಯ ಮೀನಕಳಿಯದಲ್ಲಿ ರಾಜಾ ಅಲಿಯಾಸ್ ರಾಘವೇಂದ್ರ ಎಂಬ ವ್ಯಕ್ತಿಯ ಕೊಲೆ ನಡೆದಿತ್ತು. ಈ ಸಂಬಂಧ ಅರ್ಜುನ ಮೂಡುಶೆಡ್ಡೆ ಮತ್ತು ಮನೋಜ್ ಎಂಬುವವರನ್ನು ವಶಕ್ಕೆ ಪಡೆದು, ಅವರ ಮೂಲಕ ಇತರ ಆರೋಪಿಗಳ ಸೆರೆಗೆ ಪೊಲೀಸರು ಮುಂದಾಗಿದ್ದರು.
ಶನಿವಾರ ಬೆಳಗಿನ ಜಾವ ಇವರನ್ನು ಕರೆದೊಯ್ದು ಉಳಿದ ಆರೋಪಿಗಳ ಪತ್ತೆಗೆ ಹೋದಾಗ ಕಿನ್ನಿಗೋಳಿ ಬಳಿಯ ಹೊಸಕಾಡಿನಲ್ಲಿ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಪೊಲೀಸ್ ಜೀಪಿಗೆ ಕಲ್ಲು, ಬಾಟಲಿಯಿಂದ ಹಾನಿ ಮಾಡಿದ್ದು, ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.
ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಆರೋಪಿಗಳು, ಪೊಲೀಸ್ ಸಿಬ್ಬಂದಿಯನ್ನು ಶ್ರೀನಿವಾಸ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಘಟನೆಯಲ್ಲಿ ಪಿಎಸ್ಐ ನಾಗೇಂದ್ರ, ಹೆಡ್ ಕಾನಸ್ಟಬಲ್ ಸುಧೀರ್ ಪೂಜಾರಿ, ಎಎಸ್ ಐ ಡೇವಿಡ್ ಅವರಿಗೆ ಗಾಯಗಳಾಗಿವೆ.