‘ಕೋಲ್ಕತ್ತದ ಸಾಯಿ ಕನ್ಸಲ್ಟಂಟ್ನ ಸುಪ್ರಿಯಾ ಅವರು ₹ 1 ಕೋಟಿಗೆ ಚರ್ಮರೋಗವಿಜ್ಞಾನ ಸ್ನಾತಕೋತ್ತರ ಸೀಟು ಕೊಡಿಸುವುದಾಗಿ ತಿಳಿಸಿದ್ದರು. ಅವರ ಸೂಚನೆ ಮೇರೆ 2022ರ ಡಿ 2ರಂದು ದೇರಳಕಟ್ಟೆಗ ಬಂದಿದ್ದೆ. ಇಲ್ಲಿನ ವಸತಿಗೃಹದಲ್ಲಿ ಉಳಿದುಕೊಂಡು ಅವರು ಸೂಚಿಸಿದ್ದ ಏಜೆಂಟ್ ಮನೋಜ್ ಎಂಬಾತನನ್ನು ಭೇಟಿ ಆಗಿದ್ದೆ. ಮನೋಜ್ ಅವರು ಜಯಂತಿ ಎಂಬ ಮಹಿಳೆ ಹಾಗೂ ಇನ್ನೊಬ್ಬ ಸಹಾಯಕನ ಜೊತೆ ಬಂದು ದಾಖಲೆ ಪತ್ರಗಳನ್ನು ಪಡೆದಿದ್ದರು. ಕೆಇಎ ವೆಬ್ಸೈಟ್ನಲ್ಲಿ ದಾಖಲಾತಿ ಅಪ್ಲೋಡ್ ಮಾಡಲು ಮುಂಗಡವಾಗಿ ನಮ್ಮಿಂದ ₹ 50 ಸಾವಿರ ಪಡೆದಿದ್ದರು. ಮರುದಿನ ಮತ್ತೆ ₹ 49,50,000 ನಗದು ಹಾಗೂ 12.64 ಲಕ್ಷವನ್ನು ಡಿ.ಡಿ ರೂಪದಲ್ಲಿ ಪಡೆದಿದ್ದರು. ಬಳಿಕ ₹ 50 ಲಕ್ಷವನ್ನು ಎರಡು ವರ್ಷ ಕಂತಿನ ರೂಪದಲ್ಲಿ ನೀಡಲು ಸೂಚಿಸಿದ್ದರು. ವೈದ್ಯಕೀಯ ಕಾಲೇಜಿನ ಡಿನ್ನ ಸಹಿ ಇರುವ ಸೀಟು ಹಂಚಿಕೆ ಪ್ರತಿಯನ್ನು ನೀಡಿದ್ದರು. ಬಳಿಕ 2023ರ ಜ.11ರಂದು ವಿಚಾರಿಸಿದಾಗ ‘ನಿಮಗೆ ಹಂಚಿಕೆಯಾದ ಸೀಟು ರದ್ದಾಗಿದೆ. ಹಣವನ್ನು 20 ದಿನಗಳಲ್ಲಿ ಮರಳಿಸುತ್ತೇವೆ’ ಎಂದಿದ್ದರು. ಈ ಬಗ್ಗೆ ಕೆಇಎಯಲ್ಲಿ ವಿಚಾರಿಸಿದಾಗ ಮಗನಿಗೆ ಯವುದೇ ಸೀಟು ಹಮಚಿಕೆ ಆಗಿಲ್ಲ ಎಂದು ಗೊತ್ತಾಯಿತು. ಜ.20ರಂದು ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ವಿಚಾರಿಸಿದಾಗ ಮೋಸ ಹೋಗಿದ್ದು ತಿಳಿಯಿತು’ ಎಂದು ನಾಯ್ಡು ಅವರು ದೂರಿನಲ್ಲಿ ತಿಳಿಸಿದ್ದಾರೆ.