ಉಪ್ಪಿನಂಗಡಿ: ಗ್ರಾಹಕರನ್ನು ಸೆಳೆಯಲು ಸಾಲ ಮೇಳ, ಉದ್ಯೋಗ ಮೇಳದಂತೆ 34-ನೆಕ್ಕಿಲಾಡಿ ಸಂತೆಕಟ್ಟೆಯಲ್ಲಿ ಗುರುವಾರ ಸಂತೆ ಮೇಳ ನಡೆಯಿತು.
ಕೋವಿಡ್– 19 ನಂತರ ಸಂತೆ ವ್ಯಾಪಾರದಿಂದ ದೂರ ಇದ್ದ ಗ್ರಾಹಕರು ಮತ್ತೆ ಸಂತೆಯತ್ತ ಮುಖಮಾಡಿದ್ದಾರೆ. ತರಕಾರಿ, ಕಾಯಿಪಲ್ಲೆ ಖರೀದಿಗೆ ಗ್ರಾಹಕರು ಮುಗಿಬಿದ್ದರು.
ಸಂತೆ ಮೇಳದಲ್ಲಿ ತರಕಾರಿಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೂಪರ್ ಮಾರ್ಕೆಟ್ಗಳಲ್ಲಿ ತರಕಾರಿ ಖರೀದಿಸುತ್ತಿದ್ದ ಪರಿಸರದ ಮಂದಿ, ವಾರಕ್ಕೊಮ್ಮೆ ಸಂತೆಗೆ ಬಂದು ತರಕಾರಿ ಖರೀದಿ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಪೇಟೆಯ ಅಂಗಡಿಯಲ್ಲಿ ಬೀನ್ಸ್ ಕೆ.ಜಿ.ಯೊಂದಕ್ಕೆ ₹ 40, ಟೊಮೆಟೊ ₹ 35 ದರ ಇದೆ. ಉಪ್ಪಿನಂಗಡಿ ಸಂತೆ ಮೇಳದಲ್ಲಿ ಬೀನ್ಸ್ ಕೆ.ಜಿ.ಗೆ ₹ 20, ಟೊಮೆಟೊ ಕೆ.ಜಿ.ಗೆ ₹ 20, ಸೌತೆಗೆ ₹ 15 ನಿಗದಿಯಾಗಿತ್ತು. ಸಂತೆ ಮೇಳದಲ್ಲಿ ₹ 100ಕ್ಕೆ ಒಂದೂವರೆ ಕೆ.ಜಿ. ಬಂಗುಡೆ ಮೀನು ದೊರೆಯಿತು.
ಲಾಕ್ಡೌನ್ ಬಳಿಕ ಜನರು ಸಂತೆಗೆ ಬರುವುದನ್ನು ಬಿಟ್ಟಿದ್ದರು. ಇದರಿಂದ ಸಂತೆ ವ್ಯಾಪಾರ ಕಡಿಮೆಯಾಗಿ, ರೈತರು ಕಂಗಾಲಾಗಿದ್ದರು. ರೈತರು ಮತ್ತು ತರಕಾರಿ ವ್ಯಾಪಾರಸ್ಥರೊಂದಿಗೆ ಮಾತುಕತೆ ನಡೆಸಿ, ಯಾರಿಗೂ ನಷ್ಟವಾಗದಂತೆ ಕಡಿಮೆ ಲಾಭ ಉಳಿಸಿಕೊಂಡು ತರಕಾರಿ ಮಾರಾಟ ಮಾಡಲು ನಿರ್ಧರಿಸಲಾಯಿತು ಎನ್ನುತ್ತಾರೆ ಸಂತೆ ಮಾರುಕಟ್ಟೆಯ ಏಲಂ ಬಿಡ್ಡರ್ ರಶೀದ್ ಉಪ್ಪಿನಂಗಡಿ.