ಮಂಗಳೂರು: ರೈತರ ಹೋರಾಟಕ್ಕೆ ಮಂಡಿಯೂರಿದ ಕೇಂದ್ರ ಸರ್ಕಾರ, ಕೃಷಿ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಹಿಂಪಡೆದಿದೆ. ಇದು ರೈತರು ಹಾಗೂ ವಿರೋಧ ಪಕ್ಷಗಳ ಹೋರಾಟಕ್ಕೆ ದೊರೆತ ಜಯವಾಗಿದೆ. ಒಂದು ವರ್ಷ ನಡೆದ ಹೋರಾಟದಲ್ಲಿ ಪ್ರಾಣತೆತ್ತ ರೈತರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಹೋರಾಟ ಟೀಕಿಸಿ ಅವಮಾನಿಸಿದ ಬಿಜೆಪಿ ಪ್ರಮುಖರು ದೇಶದ ಜನರಲ್ಲಿ ಕ್ಷಮೆ ಕೇಳಬೇಕು. ಸರ್ವಾಧಿಕಾರಿಯಂತೆ ವರ್ತಿಸಿದ ಕೇಂದ್ರ ಸರ್ಕಾರ ಕೊನೆಗೂ ಜನಾಂದೋಲನಕ್ಕೆ ಮಣಿದಿದೆ. ರೈತರ ಹೋರಾಟ ಪ್ರಜಾಪ್ರಭುತ್ವಕ್ಕೆ ದೊರೆತ ಯಶಸ್ಸಾಗಿದೆ ಎಂದರು.
ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಸರ್ಕಾರ ಮಸೂದೆಯನ್ನು ವಾಪಸ್ ಪಡೆಯಲು ನಿರ್ಧರಿಸಿದೆ. ಈ ಹಿಂದೆ ಚುನಾವಣೆ ವೇಳೆ ಇಂಧನದ ಮೇಲಿನ ತೆರಿಗೆ ಇಳಿಸುವ ಮೂಲಕ ತನಗೆ ಚುನಾವಣೆಯೇ ಮುಖ್ಯ ಎಂಬುದನ್ನು ಬಿಜೆಪಿ ಸರ್ಕಾರ ಸಾಬೀತುಪಡಿಸಿದೆ. ಇನ್ನಾದರೂ ರೈತ ವಿರೋಧಿ, ಜನವಿರೋಧಿ ನೀತಿಯನ್ನು ಕೈಬಿಡದಿದ್ದರೆ ಜನರು ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ರೈತ ವಿರೋಧಿ ಮಸೂದೆ ವಿರುದ್ಧದ ಹೋರಾಟಕ್ಕೆ ಜಯ ದೊರೆತಿದೆ. ಇಂಧನ ಹಾಗೂ ಗ್ಯಾಸ್ ಬೆಲೆ ಏರಿಕೆ ವಿರುದ್ಧವೂ ಜನರು ಸಹನೆ ಕಳೆದುಕೊಂಡಿದ್ದಾರೆ. ಇದರ ವಿರುದ್ಧ ನಡೆಯುವ ಹೋರಾಟಕ್ಕೆ ಕಾಂಗ್ರೆಸ್ ಸಾಥ್ ನೀಡುತ್ತದೆ. ಬ್ರಿಟಿಷರ ವಿರುದ್ಧ ಜನಾಂದೋಲನ ನಡೆಸಿ, ಅವರನ್ನು ಓಡಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧವೂ ಇದೇ ಮಾದರಿಯ ಹೋರಾಟವನ್ನು ಜನರು ನಡೆಸುವ ಕಾಲ ಬಂದಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.