ಮಂಗಳೂರು:ರೌಡಿ ಟಾರ್ಗೆಟ್ ಇಲ್ಯಾಸ್ನನ್ನು ಇರಿದು ಕೊಲೆ ಮಾಡಿದ ಆರೋಪದ ಮೇಲೆ ರೌಡಿ ದಾವೂದ್ ಧರ್ಮನಗರ ಗುಂಪಿನ ಇಬ್ಬರು ಯುವಕರನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಅಬ್ಬಕ್ಕ ವೃತ್ತದ ಸಲಫಿ ಮಸೀದಿ ಬಳಿಯ ನಿವಾಸಿ ಮಹಮ್ಮದ್ ಸಮೀರ್ ಅಲಿಯಾಸ್ ರೋಬರ್ಟ್ (27) ಮತ್ತು ಕಾಸರಗೋಡು ಜಿಲ್ಲೆ ಮಂಜೇಶ್ವರ ಸಮೀಪದ ಪಾವೂರು ಗೇರುಕಟ್ಟೆ ನಿವಾಸಿ ನಮೀರ್ ಹಂಝ (34) ಬಂಧಿತರು. ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆ ಇನ್ಸ್ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಮತ್ತು ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಂ ನೇತೃತ್ವದ ತಂಡಗಳು ಇಬ್ಬರನ್ನೂ ಬಂಧಿಸಿವೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ಸಮೀರ್ ವಿರುದ್ಧ ಟಾರ್ಗೆಟ್ ಗುಂಪಿನ ಸುರ್ಮಾ ಇಮ್ರಾನ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಮತ್ತು ಟಾರಗೆಟ್ ಗುಂಪಿನ ಹಂಝ ಎಂಬಾತನ ಮನೆಗೆ ಹಾನಿ ಮಾಡಿದ ಆರೋಪದ ಮೇಲೆ ಉಳ್ಳಾಲ ಠಾಣೆಯಲ್ಲಿ ಎರಡು ಪ್ರಕರಣಗಳಿವೆ.
ನಮೀರ್ ಹಂಝ ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆಯತ್ನ, ಸುರತ್ಕಲ್ ಠಾಣೆ ಮತ್ತು ಮಂಗಳೂರು ಉತ್ತರ ಠಾಣೆಗಳ ವ್ಯಾಪ್ತಿಯಲ್ಲಿ ತಲಾ ಒಂದು ದರೋಡೆ ಪ್ರಕರಣ ಮತ್ತು ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಒಂದು ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ.