ಬಾಳೆಹೊನ್ನೂರು: ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡವರು, ನಿರ್ಗತಿಕರು, ಕೃಷಿಕರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಜನತೆ ಅದನ್ನು ಗುರುತಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಿ ದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ತಿಳಿಸಿದರು.
ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಮದ ದೂಬ್ಳ ಕೈಮರದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಸಭೆ ಯಲ್ಲಿ ಮಾತನಾಡಿದ ಅವರು, ‘ಕೇಂ ದ್ರದ ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹದಿನೈದು ವರ್ಷದಿಂದ ಶಾಸಕರು ಪರ್ಯಾಯವಾಗಿ ಯಾರನ್ನೂ ಬೆಳೆಸಿಲ್ಲ. ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದರೂ ಅದನ್ನು ಅನುಷ್ಠಾನಗೊಳಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಶಾಸಕರು ಯೋಜನೆಗಳನ್ನು ಅನುಷ್ಠಾನಗೊ ಳಿಸುವಲ್ಲಿ ನಿರ್ಲಕ್ಷ್ಯ ತೋರಿದಾಗ ಪಾದಯಾತ್ರೆ ಮೂಲಕ ಹೋರಾಟ ನಡೆಸಬೇಕಾಯಿತು’ ಎಂದರು.
‘ಜನಪರ ಅಡಳಿತಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ ಮೇ 12ರಂದು ನಡೆ ಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನನ್ನು ಗೆಲ್ಲಿಸಿ. ನಾನು ಯಾವತ್ತೂ ವರ್ಗಾವಣೆ ದಂದೆ ನಡೆಸಿಲ್ಲ. ಅದರ ಅಗತ್ಯವೂ ನನಗಿಲ್ಲ. ಆರೋಪ ಮಾಡುವವರು ಅದನ್ನು ಸಾಬೀತುಪಡಿಸಿದಲ್ಲಿ ರಾಜಕೀಯ ಜೀವನದಿಂದ ನಿವೃತ್ತಿಯಾ ಗುವುದಾಗಿ’ ಘೋಷಿಸಿದರು.
ಬಾಳೆಮನೆ ನಟರಾಜ್ ಮಾತನಾಡಿ, ‘ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷ 60 ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ಅವರ ಪ್ರಕಾರ ಅಭಿವೃದ್ಧಿ ಎಂದರೇನು’ ಎಂದು ಪ್ರಶ್ನಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್ ಮಾತನಾಡಿ, ‘15 ವರ್ಷಗಳಿಂದ ಶಾಸಕರಾಗಿರುವ ಡಿ.ಎನ್.ಜೀವರಾಜ್ ಕ್ಷೇತ್ರದ ಬಿಲ್ಲವ ಸಮುದಾಯ ಭವನಕ್ಕೆ ಕೇವಲ ಎರಡು ಲಕ್ಷ ಮಾತ್ರ ನೀಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ₹70 ಲಕ್ಷ ನೀಡಿದೆ. ದೇಶದಲ್ಲಿ ಶೇ 70ರಷ್ಟು ಹಿಂದುಳಿದವರಿದ್ದಾರೆ. ದೇಶದಲ್ಲಿ ಮೊದಲಬಾರಿಗೆ ಬಡವರ ಕಷ್ಟವನ್ನು ಅರಿತು ಅನ್ನಭಾಗ್ಯ ಯೋಜನೆ ಜಾರಿಗೆ ತಂದ ರಾಜ್ಯ ನಮ್ಮದು’ ಎಂದರು. ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತ್ಯಜಿಸಿ 30ಕ್ಕೂ ಅಧಿಕ ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಪಕ್ಷದ ವೀಕ್ಷಕ ದಿನೇಶ್ ಕಡ್ತೂರು, ಕಿಸಾನ್ ಕಾಂಗ್ರೆಸ್ ರಾಜ್ಯಾ ಧ್ಯಕ್ಷ ಸಚಿನ್ ಮೀಗ, ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಸಂತೋಷ್ ಕುಮಾರ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೋಳ್ಳಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕುಕ್ಕೊಡಿಗೆ ರವೀಂದ್ರ, ಈರೇಗೌಡ, ಮೆಣಸಿನಹಾಡ್ಯದ ಗೋಪಾಲಕೃಷ್ಣ, ವಾಸುದೇವ್, ಹರೀಶ್, ಡಿ.ಬಿ.ರಾಜೇಂದ್ರ, ರಮೇಶ್, ಚಂದ್ರೇಗೌಡ, ನಾಗೇಶ್, ಸಾಧಿಕ್ ನಾರ್ವೆ ಇದ್ದರು.
ತಡವಾಗಿ ಮುಗಿದ ಕಾರ್ಯಕ್ರಮ
ಕಾಂಗ್ರೆಸ್ ಕಾರ್ಯಕ್ರಮ ನಾಲ್ಕು ಗಂಟೆಗೆ ಆರಂಭಗೊಂಡು ಏಳು ಗಂಟೆಗೆ ಮುಕ್ತಾಯವಾಗಬೇಕಿತ್ತು. ಆದರೆ, 5.30ಕ್ಕೆ ಆರಂಭಗೊಂಡ ಕಾರ್ಯಕ್ರಮ ಮುಕ್ತಾಯಗೊಳ್ಳುವಾಗ 7.30 ದಾಟಿತ್ತು. ಸ್ಥಳದಲ್ಲಿದ್ದ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ನಡುವೆ 7 ಗಂಟೆಯಿಂದ ದೊಡ್ಡ ಎಲ್ಇಡಿ ಪರದೆಯಲ್ಲಿ ಬಿಜೆಪಿ ಪಕ್ಷದ ಪ್ರಚಾರವನ್ನು ಬಿತ್ತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಯೋಜಕರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾಂಗ್ರೆಸ್ ಕಾರ್ಯಕ್ರಮ ಮುಗಿಯುವವರೆಗೆ ಕಾದು ನಂತರ ಪ್ರದರ್ಶಿಸಲು ಮುಂದಾದರು. ಆ ವೇಳೆಗೆ ಅಲ್ಲಿ ಕಾಂಗ್ರೆಸ್ ಕಾರ್ಯ ಕ್ರಮ ಮುಗಿಸಿ ಹೊರಟಿದ್ದ ಕಾರ್ಯಕರ್ತರು ಟಿಡಿಆರ್ಗೆ ಜೈ, ಕಾಂಗ್ರೆಸ್ ಪಕ್ಷಕ್ಕೆ ಜೈ ಎಂದು ಘೋಷಣೆ ಕೂಗಿದ್ದು ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.