ಮಂಗಳೂರು: ನೆಲದ ಹಳೆ ಜ್ಞಾನ ಪರಂಪರೆಯ ರಕ್ಷಣೆಯ ಜೊತೆ ಹೊಸ ಆಗುಹೋಗುಗಳಿಗೆ ಸ್ಪಂದಿಸಿ ‘ನೂತನ ಶಿಕ್ಷಣ ನೀತಿ’ ರೂಪಿತವಾಗಿದ್ದು, ಎಲ್ಲೆಡೆ ಮಂಥನ, ಸಂವಾದಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದುವಿದ್ಯಾಭಾರತಿ ರಾಷ್ಟ್ರೀಯ ಶಿಕ್ಷಣ ಸಂಸ್ಥಾನ ಜಾಲತಾಣ ಸದಸ್ಯ, ರಾಜ್ಯ ಸರ್ಕಾರದ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಹೇಳಿದರು.
ಮೈಸೂರಿನ ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಪ್ರೊ.ಎ.ಎಂ.ನರಹರಿ ಬರೆದ ‘ಶಿಕ್ಷಣ ಮನ್ವಂತರ-ರಾಷ್ಟ್ರೀಯ ಶಿಕ್ಷಣ ನೀತಿ-2020’ ಕೃತಿ ಕುರಿತು ನಗರದ ಅಮುಕ್ತ್ ಕಚೇರಿಯಲ್ಲಿ ಭಾನುವಾರ ನಡೆದ ಶಿಕ್ಷಣ ಸಂವಾದದಲ್ಲಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ಹಿಂದಿನ ಶಿಕ್ಷಣ ನೀತಿಗಳ ಪರಿಣಾಮ ಮತ್ತು ಜಾಗತಿಕ ಆಗು ಹೋಗುಗಳನ್ನು ಗಮನದಲ್ಲಿರಿಸಿ ರೂಪಿಸಿದೆ. ಉತ್ತರ ಭಾರತದ ಬುಡಕಟ್ಟು ಭಾಷೆಗಳನ್ನು ಉಳಿಸುವ ಕೆಲಸ ನಡೆಯುತ್ತಿದೆ. ಕೆಲವು ರಾಜ್ಯಗಳಲ್ಲಿ ಬುಟಕಟ್ಟು ಭಾಷೆಗಳ ಪಠ್ಯಪುಸ್ತಕ ರಚನೆಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಮಾತೃಭಾಷೆ ಕಲಿಕೆ ನಡೆಯುತ್ತಿದೆ’ ಎಂದರು.
ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮಾಯಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಯೋಗೀಶ್ ಮಾತನಾಡಿ, ‘ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಮೂಲಕ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹಣ ಹೋಗುತ್ತಿದ್ದು, ಮಾತೃಭಾಷೆಯ ಗತಿ ಏನು?’ ಎಂದು ಪ್ರಶ್ನಿಸಿದರು.
ಕೃತಿ ಕುರಿತು ಪ್ರೊ.ಎ.ಎಂ.ನರಹರಿ ಮಾತನಾಡಿದರು. ನೆಹರು ಚಿಂತನ ಕೇಂದ್ರದ ನಿರ್ದೇಶಕ ಡಾ. ರಾಜಾರಾಂ ತೋಳ್ಪಾಡಿ, ಅಮುಕ್ತ್ ಕಾರ್ಯದರ್ಶಿ ಡಾ.ಬಿ.ಕೆ.ವಿಶಾಲಾ, ಡಾ.ಉದಯಕುಮಾರ್ ಇರ್ವತ್ತೂರ್, ಪತ್ರಕರ್ತ ತಾರಾನಾಥ ಕಾಪಿಕಾಡ್, ಪ್ರಾಧ್ಯಾಪಕ ಸೋಮಶೇಖರಪ್ಪ ಮಾತನಾಡಿದರು.
ಡಾ.ಗಣಪತಿ ಭಟ್ ಕುಳವರ್ಮ, ಉಮ್ಮಪ್ಪ ಪೂಜಾರಿ, ಡಾ.ಮಾಧವ, ನಿವೃತ್ತ ಪ್ರಾಂಶುಪಾಲ ಎಂ. ಬಾಲಚಂದ್ರ ಗೌಡ ಮತ್ತಿತರರು ಇದ್ದರು.