ಬೆಳ್ತಂಗಡಿ: ‘ನೇತ್ರಾವತಿ ಬಚಾವೋ’ ಆಂದೋಲನ ಸಮಿತಿಯ ಸಮಾವೇಶವು ಬೆಳ್ತಂಗಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಶನಿವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಪ್ರಧಾನ ಸಂಚಾಲಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ‘ನಮ್ಮ ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ಮೇಲೆ ವ್ಯವಸ್ಥಿತವಾಗಿ ಅತ್ಯಾಚಾರ ನಡೆಯುತ್ತಿದ್ದಾಗ ಸುಮ್ಮನಿರುವುದು ಸರಿಯಲ್ಲ. ಇದರ ವಿರುದ್ಧ ಹೋರಾಟ ನಡೆಸುವುದು ನಮ್ಮ ಕರ್ತವ್ಯ’ ಎಂದರು.
ಡಿ.18, 19, 20 ರಂದು ಮುಂಡಾಜೆ ಗಾಂಧಿ ಕಟ್ಟೆಯಿಂದ ಉಪ್ಪಿನಂಗನಡಿ ತನಕ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಯಶಸ್ವಿಗೊಳಿಸಲು ಗ್ರಾಮ ಗ್ರಾಮಗಳಲ್ಲಿ ಜನರನ್ನು ಸಂಘಟಿಸಬೇಕು ಎಂದು ಹೇಳಿದರು.
‘ಶೇ 40 ಕಮಿಷನ್, ಭ್ರಷ್ಟಾಚಾರ, ಅಕ್ರಮ-ಸಕ್ರಮ ಯೋಜನೆಯಲ್ಲಿ ಪಕ್ಷಪಾತ, ಕಸ್ತೂರಿರಂಗನ್ ವರದಿ, ನಿವೇಶನ- ವಸತಿ ಸೌಕರ್ಯಕ್ಕಾಗಿ, ಕುದುರೆಮುಖ ರಾಷ್ಟ್ರೀಯ ಉದ್ಯಾನ ವಾಸಿಗಳಿಗೆ ಮೂಲಸೌಕರ್ಯಗಳಿಗಾಗಿ ಯೂ ಈ ಹೋರಾಟ ನಡೆಯಲಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಧರಣೇಂದ್ರ ಕುಮಾರ್, ಕೆ.ಕೆ. ಶಾಹುಲ್ ಹಮೀದ್ ಮಾತನಾಡಿದರು. ಸಭೆಯಲ್ಲಿ ಹಲವಾರು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಿತಿಯ ಸಂಚಾಲಕ ಶೇಖರ್ ಕುಕ್ಕೇಡಿ, ನಮಿತಾ ಪೂಜಾರಿ ಇದ್ದರು. ವಕೀಲ ಮನೋಹರ ಕುಮಾರ್ ಇಳಂತಿಲ ಕಾರ್ಯಕ್ರಮ ನಿರ್ವಹಿಸಿದರು.