ಮಂಗಳೂರು: ಯೆನೆಪೋಯ ಸಂಸ್ಥೆಗಳ ಆಯುರ್ವೇದ ಕಾಲೇಜಿನ ಹೊಸ ಕಟ್ಟಡ, ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಕಟ್ಟಡ, ಕಲಾ, ವಿಜ್ಞಾನ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟನೆ ಮತ್ತು ರಕ್ತದಾನ ಶಿಬಿರ ಇದೇ 14ರಂದು ನಡೆಯಲಿದೆ.
ಆಯುರ್ವೇದ ಕಾಲೇಜು, ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಕಟ್ಟಡ ಉದ್ಘಾಟನೆಯನ್ನು ಸಂಜೆ 3 ಗಂಟೆಗೆ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ನೆರವೇರಿಸುವರು. ಯೆನೆಪೋಯ ಸಂಸ್ಥೆಗಳ ಕುಲಪತಿ ಯೆನೆಪೋಯ ಅಬ್ದುಲ್ಲ ಕುಞಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಯು.ಟಿ.ಖಾದರ್ ಮತ್ತು ಆಯುಷ್ ಆಯುಕ್ತ ರಾಮಚಂದ್ರ ಪಾಲ್ಗೊಳ್ಳುವರು ಎಂದು ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಗುಲ್ಜರ್ ಅಹಮ್ಮದ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೂಳೂರಿನಲ್ಲಿ ನಿರ್ಮಿಸಿರುವಕಲಾ, ವಿಜ್ಞಾನ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಯ ಹೊಸ ಕಟ್ಟಡವನ್ನು ಬೆಳಿಗ್ಗೆ 9.30ಕ್ಕೆ ಸಚಿವ ಅಶ್ವತ್ಥನಾರಾಯಣ್ ಉದ್ಘಾಟಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಮತ್ತಿತರರ ಪಾಲ್ಗೊಳ್ಳುವರು ಎಂದು ಡೀನ್ ಅರುಣ್ ಭಾಗವತ್ ತಿಳಿಸಿದರು.
14ರಂದು ನಾಲ್ಕು ಕಡೆಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಒಳಗೊಂಡು 2 ಸಾವಿರಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಲಿದ್ದಾರೆ ಎಂದು ಎನ್ಎಸ್ಎಸ್ ಸಂಯೋಜಕಿ ಅಶ್ವಿನಿ ಶೆಟ್ಟಿ ತಿಳಿಸಿದರು.
ಡಾ.ನಂದೀಶ್, ಡಾ.ನಾಗರಾಜ್, ಡಾ.ಗುರುರಾಜ್ ಮತ್ತು ಡಾ. ಅರುಣ್, ಉದಯಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.