lಕೃಷಿ ಚಟುವಟಿಕೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್ಆರ್ಇಜಿಎ) ಅನುಕೂಲ ಪಡೆಯಲು ವಯಸ್ಸಿನ ಮಿತಿ ಇದೆಯೆ?
ಉದ್ಯೋಗ ಖಾತ್ರಿ ಯೋಜನೆಯಡಿ ಅನುಕೂಲ ಪಡೆಯಲು ವಯಸ್ಸಿನ ಮಿತಿ ಇಲ್ಲ. ಆಧಾರ್ ಕಾರ್ಡ್, ಜಮೀನಿನ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಕಚೇರಿಗೆ ಸಲ್ಲಿಸಿ ‘ಉದ್ಯೋಗ ಚೀಟಿ’ ಪಡೆಯಿರಿ. ಜಮೀನಿನಲ್ಲಿ ಮಾಡಲು ಉದ್ದೇಶಿಸಿರುವ ಕೆಲಸದ ವಿವರ ಸಲ್ಲಿಸಿ, ಮಂಜೂರಾತಿ ಪಡೆಯಿರಿ.
ಅಶೋಕ್ ಶೆಟ್ಟಿ, ಬಡಕಬೆಳ್ಳೂರು, ಬಂಟ್ವಾಳ/ ವಿನೋದ್ ಬಂಗೇರ, ಪಜೀರು/ ವೆಂಕಟೇಶ್, ಮಂಚಿ, ಬಂಟ್ವಾಳ
l2018ರಲ್ಲಿ ಅಡಿಕೆ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದೆ. ಪರಿಹಾರವೇ ಬಂದಿಲ್ಲ ಏಕೆ?
ಅಡಿಕೆ ಬೆಳೆ ತೋಟಗಾರಿಕೆ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಬಂಟ್ವಾಳದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ವಿಚಾರಿಸಿ.
ಸದಾನಂದ ಪೂಜಾರಿ, ಬೆಳ್ತಂಗಡಿ
lಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ ಎರಡು ಕಂತಿನ ಬಳಿಕ ನನಗೆ ಸಹಾಯಧನ ಪಾವತಿಯಾಗಿಲ್ಲ ಏಕೆ?
ನೋಂದಣಿಯಾದ ಖಾತೆಗೆ ನಿರಂತರ ಪಾವತಿಯಾಗುತ್ತಿದೆ. (ತಕ್ಷಣವೇ ದಾಖಲೆ ಪರಿಶೀಲಿಸಲಾಯಿತು). ಶನಿವಾರವೇ ನಿಮ್ಮ ವಾಟ್ಸ್ ಆ್ಯಪ್ಗೆ ಹಣ ಪಾವತಿಗೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ಕಳುಹಿಸಲಾಗುವುದು.
ಅಬ್ದುಲ್ ಖಾದರ್, ಬಂಟ್ವಾಳ
lಕೋವಿಡ್ನಿಂದ ಕೃಷಿ ಚಟುವಟಿಕೆಗೆ ಯಾವ ರೀತಿಯಲ್ಲಿ ಅಡಚಣೆ ಆಗಿದೆ?
ಕೋವಿಡ್ನಿಂದ ನಗರಗಳಿಂದ ಜನರು ಗ್ರಾಮೀಣ ಪ್ರದೇಶಕ್ಕೆ ಮರು ವಲಸೆ ಬಂದಿರುವುದರಿಂದ ಹೆಚ್ಚಿನ ಜನರು ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಇದರಿಂದ ಅನುಕೂಲವೇ ಆಗಿದೆ.
ಹಮೀದ್, ವಿಟ್ಲ
lಮಳೆ ಹೆಚ್ಚಾಗಿರುವುದರಿಂದ ನಾಟಿ ಮಾಡಿರುವ ಭತ್ತದ ನೇಜಿ ಕೊಳೆಯುತ್ತಿದೆ. ಏನು ಮಾಡಬೇಕು?
ಭತ್ತದ ಗದ್ದೆಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಅಗತ್ಯವಿದ್ದರೆ ತೋಡುಗಳನ್ನು ನಿರ್ಮಿಸಿ ನೀರು ಬಸಿದುಹೋಗುವಂತೆ ಮಾಡಬೇಕು.
ಜಯಂತ್, ವಿಟ್ಲಪಡ್ನೂರು
lನಮ್ಮ ನರೆಹೊರೆಯ ವ್ಯಕ್ತಿಯೊಬ್ಬರು ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಕೃಷಿ ಸಮ್ಮಾನ್ ಯೋಜನೆಯಡಿ ಪ್ರೋತ್ಸಾಹಧನ ನೀಡಿಲ್ಲ ಏಕೆ?
ಇಲ್ಲಿಂದಲೇ ಆನ್ಲೈನ್ ಮೂಲಕ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ನೀವು ಹೇಳುತ್ತಿರುವ ಪ್ರಕರಣದಲ್ಲಿ ಅರ್ಜಿದಾರರ ಹೆಸರಿಗೆ 2019ರ ಜುಲೈ 1ರ ಬಳಿಕ ಖಾತೆ ವರ್ಗಾವಣೆ ಆಗಿ, ಪಹಣಿ ಬಂದಿದೆ. ಆದ್ದರಿಂದ ಮಂಜೂರು ಆಗುತ್ತಿಲ್ಲ.
ಸುರೇಶ್, ಕನ್ಯಾನ, ಬಂಟ್ವಾಳ ತಾಲ್ಲೂಕು
lಅಡಿಕೆ ಗಿಡಗಳನ್ನು ನೆಡುವುದಕ್ಕೆ ಜೆಸಿಬಿ ಯಂತ್ರಗಳದಿಂದ ಜಾಗ ಸಮತಟ್ಟು ಮಾಡಲು ಎನ್ಆರ್ಇಜಿಎ ಯೋಜನೆಯಲ್ಲಿ ನೆರವು ಸಿಗುವುದೇ?
ಈ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.
ವಿಜಯ್, ಮೂಡುಬಿದಿರೆ
lಮಳೆ ಜಾಸ್ತಿ ಆಗಿರುವುದರಿಂದ ಅಡಿಕೆ ತೋಟಕ್ಕೆ ಕೊಳೆರೋಗ ತಡೆಯುವ ಔಷಧಿ ಸಿಂಪಡಣೆ ವಿಳಂಬವಾಗಿದೆ. ಏನು ಮಾಡಬೇಕು?
ಮಳೆ ಬಿಡುವು ಕೊಟ್ಟಾಗ ಔಷಧಿ ಸಿಂಪಡಣೆ ಮಾಡಬೇಕು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಸಲಹೆ ಪಡೆಯಿರಿ.
ಸಹನಾ, ಕೊಣಾಜೆ
lಮನೆಯ ಹಿತ್ತಿಲಿನಲ್ಲಿ ಬೆಂಡೆ ಮತ್ತು ಹೀರೆ ಬೀಜಗಳನ್ನು ಬಿತ್ತಿದ್ದು, ಯಾವ ಗೊಬ್ಬರ ಹಾಕಬೇಕು?
ಕೊಟ್ಟಿಗೆ ಗೊಬ್ಬರವೇ ಸಾಕಾಗುತ್ತದೆ. ಇದರಿಂದ ಉತ್ತಮ ಗುಣಮಟ್ಟದ ತರಕಾರಿ ಲಭಿಸುತ್ತದೆ.
ಪ್ರಕಾಶ್, ಕಟಪಾಡಿ
lನಾವು ಮಟ್ಟುಗುಳ್ಳ ಬೆಳೆದ ಜಮೀನಿನಲ್ಲಿ ನಂತರ ಭತ್ತ ಬೆಳೆದಾಗ ಕೀಟಬಾಧೆ ಜಾಸ್ತಿಯಾಗುತ್ತಿದೆ. ನಿಯಂತ್ರಣ ಹೇಗೆ?
ಭತ್ತಕ್ಕೆ ಕೀಟಗಳು ಹಾನಿ ಮಾಡಿದಾಗ ಭತ್ತದ ಒಂದು ಸಸಿಯನ್ನು ಕಿತ್ತು ಕೀಟ ಸಮೇತ ಸಮೀಪದ ರೈತ ಸಂಪರ್ಕಕ್ಕೆ ಕೇಂದ್ರಕ್ಕೆ ತಲುಪಿಸಿ. ಅದನ್ನು ಪರಿಶೀಲಿಸಿ, ಪರಿಹಾರ ಸೂಚಿಸುತ್ತಾರೆ.
ಎನ್.ಆರ್.ಪೂವಣಿ, ಉಜಿರೆ
lಕೋವಿಡ್ ಕಾರಣದಿಂದ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಉಂಟಾಗಿದ್ದು, ಪರಿಹಾರ ಏನು?
ಹೆಚ್ಚಿನ ಪ್ರದೇಶಗಳಲ್ಲಿ ಕಾರ್ಮಿಕರ ಕೊರತೆ ಇರುವುದು ಗಮನಕ್ಕೆ ಬಂದಿಲ್ಲ. ಅಂತಹ ಸಂದರ್ಭದಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ ಉಳುಮೆ, ನಾಟಿ ಮತ್ತು ಕಟಾವಿಗೆ ಯಂತ್ರೋಪಕರಣಗಳ ನೆರವು ಪಡೆಯಬಹುದು.
ಅನಂತ ಪದ್ಮನಾಭ, ಬಾರ್ಕೂರು
lಮಳೆ ಜಾಸ್ತಿಯಾಗಿ ಭತ್ತದ ಗದ್ದೆಯಲ್ಲಿನ ಗೊಬ್ಬರ ಕೊಚ್ಚಿಕೊಂಡು ಹೋಗುತ್ತಿದೆ. ಮತ್ತೆ ಯಾವ ಗೊಬ್ಬರ ಬಳಸಬೇಕು?
ಕೊಟ್ಟಿಗೆ ಗೊಬ್ಬರ ಬಳಸಿದ್ದರೆ ಯಾವುದೇ ಚಿಂತೆ ಬೇಡ. ಸದ್ಯಕ್ಕೆ ಗದ್ದೆಯಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಕೊಟ್ಟಿಗೆ ಗೊಬ್ಬರದ ಸಾರ ಜಮೀನಿನಿಂದ ಹೊರ ಹೋಗುವುದಿಲ್ಲ.
ಅಶೋಕ್, ಸುಬ್ರಹ್ಮಣ್ಯ
lಇಂಟರ್ನೆಟ್ ಸಮಸ್ಯೆಯಿಂದ ಬೆಳೆ ವಿಮೆ ನೋಂದಣಿ, ಎನ್ಆರ್ಇಜಿಎ ನೋಂದಣಿಗೆ ಸಮಸ್ಯೆಯಾಗುತ್ತಿದೆ. ಪರಿಹಾರ ಇಲ್ಲವೆ?
ಸುಳ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ಸಲ್ಲಿಸಿ. ನಾವು ಕೂಡ ಈ ಕುರಿತು ಗಮನ ಸೆಳೆಯುತ್ತೇವೆ.
ಸುದರ್ಶನ್, ಬಾರ್ಕೂರು
lಭತ್ತದ ಗದ್ದೆಯಲ್ಲಿ ಪಾಚಿ ಆವರಿಸುತ್ತಿದೆ. ನಿಯಂತ್ರಣ ಹೇಗೆ?
ಪಾಚಿ ಕಡಿಮೆ ಪ್ರದೇಶದಲ್ಲಿದ್ದರೆ ಕೈಯಿಂದಲೇ ತೆಗೆದು ಹೊರಹಾಕಿ. ಹೆಚ್ಚಿನ ವಿಸ್ತೀರ್ಣದಲ್ಲಿದ್ದರೆ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ, ಸಲಹೆ ಮತ್ತು ಔಷಧಿ ಪಡೆಯಿರಿ.
ಸತೀಶ್ ಶೆಟ್ಟಿ, ಕಾರ್ಕಳ
lಜಂಟಿ ಖಾತೆ ಹೊಂದಿರುವ ರೈತರನ್ನು ‘ಸಣ್ಣ ರೈತ’ ಎಂದು ಪರಿಗಣಿಸಿ ಎನ್ಆರ್ಇಜಿಎ ಅಡಿ ನೆರವು ಒದಗಿಸಲು ಸಾಧ್ಯವಿಲ್ಲವೆ?
ಈಗ ಇರುವ ನಿಯಮಾವಳಿಗಳಲ್ಲಿ ಅವಕಾಶವಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಈ ಕುರಿತು ಮನವಿ ಸಲ್ಲಿಸಿ.
ಗಡಿಯ ರೈತರ ಗೋಳು
ಹಮೀದ್, ಹೆಜಮಾಡಿ
lಉಡುಪಿ ಜಿಲ್ಲೆಯ ಹೆಜಮಾಡಿ ನಿವಾಸಿಯಾಗಿರುವ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಜಮೀನು ಹೊಂದಿದ್ದಾರೆ. ಸೀಲ್ಡೌನ್ ಕಾರಣದಿಂದ ದೀರ್ಘ ಕಾಲ ಜಮೀನಿಗೆ ತೆರಳಲು ಆಗುತ್ತಿಲ್ಲ. ಪರಿಹಾರ ಏನು?
ಉತ್ತರ: ಉಡುಪಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಂಡು ಜಮೀನಿಗೆ ಬಂದು ಕೃಷಿ ಚಟುವಟಿಕೆ ನಡೆಸಬೇಕು. ಇಲ್ಲವಾದರೆ ತಾತ್ಕಾಲಿಕವಾಗಿ ಅವರು ಜಮೀನು ಇರುವ ಸ್ಥಳಕ್ಕೆ ಬಂದು ನೆಲೆಸಬೇಕು.
ಪೊಲೀಸರಿಂದ ರೈತರಿಗೆ ತೊಂದರೆ
ಶ್ರೀಧರ ಶೆಟ್ಟಿ, ಪುತ್ತೂರು
lಲಾಕ್ಡೌನ್ ಅವಧಿಯಲ್ಲಿ ಕೃಷಿ ಉತ್ಪನ್ನ ಮಾರಾಟ, ಗೊಬ್ಬರ ಮತ್ತು ಔಷಧಿ ತರುವುದಕ್ಕೂ ರೈತರಿಗೆ ಪೊಲೀಸರು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತೀರಿ?
ಕೃಷಿ ಸಂಬಂಧಿ ಚಟುವಟಿಕೆಗಳಿಗೆ ಪೊಲೀಸರು ಅಡ್ಡಿಪಡಿಸುವಂತಿಲ್ಲ. ಖಚಿತ ಮಾಹಿತಿಯೊಂದಿಗೆ ದೂರು ನೀಡಿದರೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.