ವಿಟ್ಲ: ತುಳು ನಾಟಕ ಸ್ಪರ್ಧೆಗಳು ಭಾಷೆಯ ಉಳಿವಿಗೆ ಪೂರಕ. ತುಳು ಭಾಷೆ, ಸಂಸ್ಕೃತಿ ಉಳಿವಿಗೆ ಇಂತಹ ಕಾರ್ಯಕ್ರಮಗಳ ಅಗತ್ಯ ಬಹಳಷ್ಟಿದೆ. ಕಲಾವಿದರ ಪ್ರತಿಭೆಗಳ ಅನಾವರಣಕ್ಕೆ ಇಂತಹ ಕಾರ್ಯಕ್ರಮ ಗಳು ವೇದಿಕೆಯಾಗಿದೆ. ಇದು ಕೇವಲ ಸ್ಪರ್ಧೆಯಲ್ಲ, ನಾಟಕ ತಂಡಗಳಿಗಿರುವ ಪ್ರೋತ್ಸಾಹ ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕ್ಷೇತ್ರದ ರಾಜಾಂಗಣದಲ್ಲಿ ಡಿ.6ರ ವರೆಗೆ ನಡೆಯಲಿರುವ ಒಡಿಯೂರು ತುಳು ನಾಟಕೋತ್ಸವವನ್ನು ಗುರುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.
‘ಸೂತ್ರದಾರನನ್ನು ಮರೆತರೆ ಜೀವನ ನಾಟಕ ಸುಂದರವಾಗಲು ಸಾಧ್ಯವಿಲ್ಲ. ಅಂತರಂಗ ಬಹಿರಂಗದ ಸೂತ್ರದಾರನೊಬ್ಬನೇ. ಸಂಸ್ಕೃತಿಯನ್ನು ತೋರಿಸುವ ಕೆಲಸ ಇಂತಹ ನಾಟಕ ಪ್ರದರ್ಶನದಿಂದ ಆಗಲು ಸಾಧ್ಯವಿದೆ. ಸ್ಪರ್ಧೆಯ ಮೂಲಕ ಸಂಸ್ಕೃತಿಗೆ ಕೊಡುಗೆ ನೀಡುವ ಪ್ರಯತ್ನ ಕ್ಷೇತ್ರದಿಂದ ಆಗಲಿದೆ. ನಾಟಕಗಳಲ್ಲಿ ನೈತಿಕ ಮೌಲ್ಯ ತುಂಬಿಸುವ ಸಾರವಿರಬೇಕು. ಸಂಸ್ಕೃತಿಯ ಉಳಿವಿಗೆ ಭಾಷೆಯ ಪ್ರಾತಿನಿಧ್ಯ ಬಹಳಷ್ಟಿದೆ’ ಎಂದರು.
ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ತುಳು ಭಾಷೆಯ ಪ್ರೀತಿ ಜನರಲ್ಲಿ ಮೂಡುವಂತೆ ಮಾಡುವಲ್ಲಿ ಸ್ವಾಮೀಜಿಯ ಪಾತ್ರ ಅಪಾರ. ತುಳುವಿನ ಸಂಸ್ಕೃತಿಯ ಉಳಿವಿಗೆ ಕ್ಷೇತ್ರದಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ. ತುಳು ಭಾಷೆಯ ಉಳಿವಿಗೆ ನಾಟಕಕಾರರ ಸಹಕಾರವೂ ಬಹಳಷ್ಟಿದೆ. ಎಲ್ಲರ ಸಹಕಾರಾದಿಂದ ತುಳು ಭಾಷೆಯ ಬೆಳವಣಿಗೆ ಇನ್ನಷ್ಟು ಆಗಲಿ ಎಂದರು.