ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಜತೆ ಭಾವನಾತ್ಮಕ ನಂಟು ಹೊಂದಿಲ್ಲ

ಕಾರವಾರ– ಅಂಕೋಲಾ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ಅಭ್ಯರ್ಥಿ ಆನಂದ್ ಅಸ್ನೋಟಿಕರ್
Last Updated 18 ಏಪ್ರಿಲ್ 2018, 9:05 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ– ಅಂಕೋಲಾ ಕ್ಷೇತ್ರಕ್ಕೆ ಮೊದಲ ಅಭ್ಯರ್ಥಿ ಪ್ರಕಟಿಸಿದ್ದು ಜಾತ್ಯತೀತ ಜನತಾದಳ. ಮಾಜಿ ಸಚಿವರೂ ಆಗಿರುವ ಆನಂದ ಅಸ್ನೋಟಿಕರ್ ಅವರನ್ನು ಕಣಕ್ಕಿಳಿಸುವುದಾಗಿ ಒಂದು ತಿಂಗಳ ಮೊದಲೇ ಪಕ್ಷ ಘೋಷಣೆ ಮಾಡಿತ್ತು. ಈಗಾಗಲೇ ಬಿರುಸಿನ ಪ್ರಚಾರ ನಡೆಸಿರುವ ಅವರು, ಇದೇ 23ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಇಲ್ಲಿನ ಕೋಣೆಕಾರ್ ವಾಡಾದಲ್ಲಿರುವ ಅವರ ಕಚೇರಿ ಕಾರ್ಯಕರ್ತರಿಂದ ಗಿಜಿಗುಡುತ್ತಿದ್ದರೆ, ರಸ್ತೆಯ ಇಕ್ಕೆಲಗಳಲ್ಲಿ ಸ್ಥಳೀಯ ಮುಖಂಡರ ಹತ್ತಾರು ಕಾರುಗಳು, ಕಾರ್ಯಕರ್ತರ ದ್ವಿಚಕ್ರ ವಾಹನಗಳಿದ್ದವು. ಮುಖಂಡರ ಜತೆ ಸಭೆಗಳ ಮೇಲೆ ಸಭೆ ನಡೆಸಿದ ಅವರು, ಬಿಡುವು ಮಾಡಿಕೊಂಡು ‘ಪ್ರಜಾವಾಣಿ’ ಜತೆ ಮಾತಿಗಿಳಿದರು.

ಈ ಚುನಾವಣೆ ನಿಮಗೆ ಯಾಕೆ ಮಹತ್ವದ್ದು?

ನಾನು ಚುನಾವಣೆಯನ್ನು ಎಂದಿಗೂ ಭಾವನಾತ್ಮಕವಾಗಿ ಪರಿಗಣಿಸಿದವನಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದೇ ಬೇಡ, ಸಾಮಾಜಿಕವಾಗಿ ಕೆಲಸಗಳನ್ನು ಮಾಡಿಕೊಂಡು ಇದ್ದು ಬಿಡೋಣ ಎಂದುಕೊಂಡಿದ್ದೆ. ನಮ್ಮ ಕುಟುಂಬ 25 ವರ್ಷಗಳಿಂದ ರಾಜಕೀಯದಲ್ಲಿದೆ. ನನ್ನ ತಂದೆಯ ಬಗ್ಗೆ ಕ್ಷೇತ್ರದ ಜನರಿಗೆ ಅಪಾರ ಗೌರವವಿದೆ. ಅದರ ಸಲುವಾಗಿ ಮತ್ತೆ ರಾಜಕೀಯ ಪ್ರವೇಶ ಮಾಡಿದ್ದೇನೆ. ಜನರ ಕೆಲಸಗಳನ್ನು ಮಾಡಲು ಉತ್ಸುಕನಾಗಿದ್ದೇನೆ. ಹೀಗಾಗಿ ಈ ಚುನಾವಣೆ ನನಗೆ ಅತ್ಯಂತ ಮಹತ್ವದ್ದಾಗಿದೆ.

 ಕ್ಷೇತ್ರದಲ್ಲಿ ನಿಮ್ಮ ಪ್ರಚಾರ ಕಾರ್ಯ ಹೇಗೆ ಭಿನ್ನವಾಗಿದೆ?
ನಾವು ಎಲ್ಲ ಸಮುದಾಯಗಳ ಮತದಾರರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದೇವೆ. ಇಲ್ಲಿನ ಶಾಸಕರು ಜನಸಾಮಾನ್ಯರಿಗೆ ಸಿಕ್ಕಿಲ್ಲ. ಅಸ್ನೋಟಿಕರ್ ಕುಟುಂಬದವರು ನೀಡಿದಷ್ಟು ಮುಕ್ತವಾದ ವಾತಾವರಣವನ್ನೂ ಅವರು ಜನರಿಗೆ ನೀಡಿಲ್ಲ. ಇದು ಒಂದುರೀತಿಯಲ್ಲಿ ನನಗೆ ಶಕ್ತಿ ನೀಡಿದಂತಾಗಿದೆ! ಪ್ರಚಾರ ಕಾರ್ಯಕ್ಕಾಗಿ ನಾನು ಹಳ್ಳಿಗಳಿಗೆ ತೆರಳಿದಾಗ ಇದು ಅರಿವಿಗೆ ಬರುತ್ತಿದೆ. ಹಳ್ಳಿಗಳಿಂದ ನಾನು ವಾಪಸ್ ಬರುವಾಗ ಯುವಕರು ಸ್ವಪ್ರೇರಣೆಯಿಂದ 200–300 ದ್ವಿಚಕ್ರ ವಾಹನಗಳಲ್ಲಿ ನನ್ನನ್ನು ಬೆಂಬಲಿಸಿ ಜತೆಗೆ ಬರುತ್ತಿದ್ದಾರೆ.

ಮೊದಲೇ ಟಿಕೆಟ್ ಘೋಷಣೆ ಮಾಡಿದ್ದು ಪ್ರಚಾರ ಕಾರ್ಯ ಹಮ್ಮಿಕೊಳ್ಳಲು ಸಹಕಾರಿಯೇ?
ನಮ್ಮ ಕ್ಷೇತ್ರ 40 ಗ್ರಾಮ ಪಂಚಾಯ್ತಿಗಳನ್ನು ಒಳಗೊಂಡಿದೆ. ಎರಡು ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ. ಎಲ್ಲರನ್ನೂ ತಲುಪಲು ಸಾಕಷ್ಟು ಸಮಯಾವಕಾಶ ಬೇಕು. ಆದ್ದರಿಂದ ಒಂದು ತಿಂಗಳ ಮೊದಲೇ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದ್ದು ಅನುಕೂಲವಾಯಿತು. ಈಗಾಗಲೇ ಒಂದು ಹಂತದ ಪ್ರಚಾರ ಮುಗಿಸಿದ್ದೇನೆ. ಎರಡನೇ ಹಂತಕ್ಕೆ ಸಿದ್ಧತೆ ಮಾಡಿಕೊಂಡಿದ್ದೇನೆ.

ನೀವು ಆಯ್ಕೆಯಾದರೆ ಕ್ಷೇತ್ರ ಏನು ನಿರೀಕ್ಷಿಸಬಹುದು?
ನಮ್ಮಜಿಲ್ಲೆಯಲ್ಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ. ಬಡ ಜನರಿಗೆ ಕಾರವಾರದಲ್ಲೇ ಚಿಕಿತ್ಸೆ ಸಿಗುವಂತಾಗಬೇಕು. ವಿವಿಧ ಸಮುದಾಯಗಳಿಗೆ ಭವನಗಳನ್ನು ನಿರ್ಮಿಸಬೇಕಿದೆ. ನಿರುದ್ಯೋಗ ಈ ಜಿಲ್ಲೆಯಲ್ಲಿರುವ ದೊಡ್ಡ ಸಮಸ್ಯೆ. ಅದರ ನಿವಾರಣೆಗೆ ಪರಿ
ಸರಕ್ಕೆ ಪೂರಕವಾದ ಕೈಗಾರಿಕೆಗಳ ಸ್ಥಾಪನೆ ಅಗತ್ಯ. ಸರ್ಕಾರದ ದೊಡ್ಡ ಯೋಜನೆಗಳಲ್ಲಿ ಸ್ಥಳೀಯರಿಗೆ ಶೇ 50ರಷ್ಟು ಉದ್ಯೋಗ ಸಿಗಬೇಕು. ರಸ್ತೆಗಳ ಅಭಿವೃದ್ಧಿಯಾಗಬೇಕು. ಹೀಗೆ ಹತ್ತು ಹಲವು ಯೋಜನೆಗಳು ಜಾರಿಯಾಗಬೇಕು.

‘ಕ್ಷೇತ್ರದಲ್ಲಿ ಹಿಡಿತ ಅಗತ್ಯ’

‘ಯಾವುದೇ ಅಭ್ಯರ್ಥಿಗೆ ತಾನು ಸ್ಪರ್ಧಿಸಲು ಬಯಸುವ ಕ್ಷೇತ್ರದಲ್ಲಿ ಹಿಡಿತವಿರಬೇಕು. ಕಾಂಗ್ರೆಸ್ ಮತ್ತು ಬಿಜೆಪಿಯವರು ಟಿಕೆಟ್ ಘೋಷಣೆಯಾದ ಬಳಿಕವೇ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಹಣ ಹಂಚಿ ಗೆಲ್ಲಬಹುದು ಎಂಬ ಭ್ರಮೆಯಲ್ಲಿ ಎರಡೂ ಪಕ್ಷಗಳಿವೆ. ನಾನು ಕ್ಷೇತ್ರದಲ್ಲಿ ಹೋದಲ್ಲೆಲ್ಲ ಮತದಾರರು ಬೆಂಬಲ ಸೂಚಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎನ್ನುತ್ತಾರೆ ಆನಂದ್ ಅಸ್ನೋಟಿಕರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT