ಮಸ್ಕಿ: ಎಂವಿಎಂ ಹಾಗೂ ವಿವಿ ಪ್ಯಾಟ್ ಗಳ ತರಬೇತಿ ಇದೆ. ಗುರುವಾರ ನಡೆಯುವ ತರಬೇತಿಗೆ ಗೈರು ಹಾಜರಿಯಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಕರಿಗೆ ಸುಳ್ಳು ಮಾಹಿತಿ ನೀಡಿದ ಸೆಕ್ಟರ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಚುನಾವಣಾಧಿಕಾರಿ ಡಾ. ಚೇತನ್ ಪಾಟೀಲ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಎಂವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳ ಪ್ರಾತ್ಯಕ್ಷಿಕೆಗೆ ಸುಮಾರು 200 ಕ್ಕೂ ಹೆಚ್ಚು ಶಿಕ್ಷಕರು ಬಂದಿದ್ದರು. ಇಂದು ಮಾಧ್ಯಮ ಹಾಗೂ ರಾಜಕೀಯ ಪಕ್ಷಗಳಿಗೆ ಮಾತ್ರ ಪ್ರಾತ್ಯಕ್ಷಿಕೆ ಇದೆ ಎಂದು ಚುನಾವಣಾಧಿಕಾರಿ ಡಾ. ಚೇತನ್ ಪಾಟೀಲ ತಿಳಿಸಿದರು.
ಇದರಿಂದ ಗೊಂದಲಕ್ಕೆ ಒಳಗಾದ ಶಿಕ್ಷಕರು, ‘ಇಂದಿನ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೆಕ್ಟರ್ ಅಧಿಕಾರಿಯೊಬ್ಬರು ಶಿಕ್ಷಣ ಇಲಾಖೆಯ ಸಂಯೋಜಕರ ಮೊಬೈಲ್ ಗೆ ಸಂದೇಶ ಕಳಿಸಿದ್ದಾರೆ. ಸೆಕ್ಟರ್ ಅಧಿಕಾರಿ ಸಂದೇಶ ಮೇರೆಗೆ ಶಿಕ್ಷಣ ಸಂಯೋಜಕರು ಎಲ್ಲಾ ಶಿಕ್ಷಕರ ಮೊಬೈಲ್ ಗೆ ಮಾಹಿತಿ ನೀಡಿ ಪಾಲ್ಗೊಳ್ಳುವಂತೆ ಆದೇಶಿಸಿದ್ದಾರೆ. 150 ಕಿಮೀ ದೂರದಿಂದ ಮಹಿಳಾ ಶಿಕ್ಷಕರು ಸೇರಿದಂತೆ ಸುಮಾರು 200 ಶಿಕ್ಷಕರು ಎಲ್ಲಾ ಕೆಲಸಗಳನ್ನು ಬಿಟ್ಟು ಇಲ್ಲಿಗೆ ಬಂದಿದ್ದೇವೆ, ಈಗ ಮಾಹಿತಿ ನೀಡಿಲ್ಲ ಎನ್ನುತ್ತೀರಿ’ ಎಂದು ಶಿಕ್ಷಕರು ಚುನಾವಾಣಾಧಿಕಾರಿಗಳೊಂದಿಗೆ ವಾದಕ್ಕೆ ಇಳಿದರು.
ಸುಳ್ಳು ಮಾಹಿತಿ ನೀಡಿದ ಅಧಿಕಾರಿ ಬಂದು ಕ್ಷಮೆ ಕೇಳುವವರೆಗೂ ಇಲ್ಲಿಂದ ನಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದ ಕೆಲ ಗಂಟೆಗಳ ಕಾಲ ತಹಶೀಲ್ದಾರ್ ಕಚೇರಿ ಸಭಾ ಭವನ ಗೊಂದಲದ ಗೂಡಾಯಿತು.
ಮಧ್ಯೆ ಪ್ರವೇಶಿಸಿದ ಚುನಾವಾಣಾಧಿಕಾರಿ ಡಾ. ಚೇತನ ಪಾಟೀಲ, ತಹಶೀಲ್ದಾರ್ ಬಲರಾಮ ಕಟ್ಟಿ,ಮನಿ ಸರ್ಕಲ್ ಇನ್ ಸ್ಪೆಕ್ಟರ್ ಚನ್ನಯ್ಯ ಹಿರೇಮಠ ಶಿಕ್ಷಕರೊಂದಿಗೆ ಮಾತುಕತೆ ನಡೆಸಿದರು.
ಸೆಕ್ಟರ್ ಅಧಿಕಾರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡ
ಲಾಗುವುದು ಎಂದು ಚುನಾವಣಾಧಿಕಾರಿ ಡಾ.ಚೇತನ್ ಪಾಟೀಲ ಭರವಸೆ ನೀಡಿದ ನಂತರ ಶಿಕ್ಷಕರು ತಮ್ಮ ಪ್ರತಿಭಟನೆ ಹಿಂದಕ್ಕೆ ಪಡೆದರು.
ಪ್ರಾತ್ಯಕ್ಷಿಕೆ: ಶಿಕ್ಷಕರ ಗದ್ದಲದ ನಡುವೆಯೂ ಅಧಿಕಾರಿಗಳು ಮಾಧ್ಯಮದವರಿಗೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಗೆ ಎಂವಿಎಂ ಹಾಗೂ ವಿವಿ ಪ್ಯಾಟ್ ಯಂತ್ರಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಮುಖಂಡರು ಇದ್ದರು.
**
ಮಾಧ್ಯಮ, ರಾಜಕೀಯ ಪಕ್ಷಗಳ ಮುಖಂಡರಿಗೆ ಮಾತ್ರ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಶಿಕ್ಷಕರಿಗೆ ಸುಳ್ಳು ಮಾಹಿತಿ ನೀಡಿದ್ದರಿಂದ ಗೊಂದಲವಾಗಿದೆ – ಡಾ. ಚೇತನ್ ಪಾಟೀಲ, ಚುನಾವಣಾಧಿಕಾರಿ.
**
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.