ಮಂಗಳೂರು: ‘ದೇವರ ಮೇಲಿನ ಶ್ರದ್ಧಾಭಕ್ತಿಗಳಿಂದ ಯಾವುದೇ ವ್ಯವಹಾರ ಮಾಡಿದಲ್ಲಿ ಭಗವಂತ ಕೈ ಬಿಡುವುದಿಲ್ಲ. ಜನರ ದೈನಂದಿನ ಸಂಚಾರಕ್ಕಾಗಿ ಬಸ್ ಉದ್ಯಮವನ್ನು ನಡೆಸುವವರು ಜನರ ವಿಶ್ವಾಸ ಗಳಿಸಬೇಕು. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ ಖಾಸಗಿ ಮಾಲೀಕತ್ವದ ಬಸ್ಗಳು ನೂರಾರು ಮಂದಿಗೆ ಉದ್ಯೋಗ, ಅವರ ಕುಟುಂಬ ಪೋಷಣೆ ಮತ್ತು ಜನತೆಗೆ ಸಂಚಾರ ಸೌಲಭ್ಯಗಳನ್ನು ಒದಗಿಸಿವೆ’ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಮಹೇಶ್ ಮೋಟಾರ್ಸ್ ಸಂಸ್ಥೆಯು ಧರ್ಮಸ್ಥಳ ಕ್ಷೇತ್ರದ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾರಿಗೆ ಉದ್ಯಮ ಪ್ರಾರಂಭಿಸಿ ಯಶಸ್ವಿ 50 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಬೀಡಿಗೆ ಬಂದು ತಮಗೆ ನೀಡಿದ ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಮಹೇಶ್ ಮೋಟಾರ್ಸ್ ಮಾಲೀಕ ಎ.ಕೆ. ಜಯರಾಮ ಶೇಖ ಮತ್ತು ಪದ್ಮಾವತಿ ಶೇಖ ದಂಪತಿ ಬಸ್ನ ಮಾದರಿಯ ಬೆಳ್ಳಿಯ ಕಲಾಕೃತಿಯೊಂದನ್ನು ಹೆಗ್ಗಡೆ ಅವರಿಗೆ ಕಾಣಿಕೆಯಾಗಿ ನೀಡಿದರು. ಮಹೇಶ್ ಮೋಟಾರ್ಸ್ನಲ್ಲಿ ಚಾಲಕನಾಗಿ 27 ವರ್ಷ ದುಡಿದ ಮಂಜುನಾಥ ಸನಿಲ್ ಎಂ. ಅವರನ್ನು ವೀರೇಂದ್ರ ಹೆಗ್ಗಡೆ ಅವರು ಸನ್ಮಾನಿಸಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಸಂಸ್ಥೆಯ ಪಾಲುದಾರರಾದ ಸಂಜ್ಯೋತಿ ಶೇಖ, ಮಹೇಶ್ ಶೇಖ, ಪ್ರಕಾಶ್ ಶೇಖ, ಕಿಶನ್ ಶೆಟ್ಟಿ ಅಡ್ಯಾರ್ ಗಾರ್ಡನ್, ಪ್ರಶಾಂತ್ ಶೆಟ್ಟಿ ರಿಯಾದ್ ಇದ್ದರು. ಸಲಹೆಗಾರ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು.