ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ

ಜೆಡಿಎಸ್‌ ನಾಯಕಿ ಗೀತಾ ಶಿವರಾಜ್ ಕುಮಾರ್
Last Updated 17 ಏಪ್ರಿಲ್ 2018, 10:55 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  ರಾಜ್ಯದಲ್ಲಿ ಜನರ ಒಲವು ಜೆಡಿಎಸ್ ಪರವಾಗಿದ್ದು, ಈ ಬಾರಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜೆಡಿಎಸ್ ನಾಯಕಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

ತಾಲ್ಲೂಕಿನ ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ಚಿಡುವ ಗ್ರಾಮದಲ್ಲಿ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕುಮಾರಸ್ವಾಮಿ ನೇತೃತ್ವದ ಸರ್ಕಾರ ರಚನೆಗೊಂಡರೆ  ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಕಿಕೊಟ್ಟ ಜನಪರ ಕಾಳಜಿಯ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಬಂಗಾರಪ್ಪ ಅವರಿಗೆ ರಾಜಕೀಯ ಶಕ್ತಿ ಕೊಟ್ಟ ಜನರು ಈ ಬಾರಿ ಜೆಡಿಎಸ್‌ಗೂ ಶಕ್ತಿ ನೀಡಲಿದ್ದಾರೆ. ಮಧು ಬಂಗಾರಪ್ಪ ಸೊರಬ ಕ್ಷೇತ್ರದಲ್ಲಿ ಅತಿ ಹೆಚ್ಚು ಬಗರ್‌ಹುಕುಂ ಸಾಗುವಳಿ ಪತ್ರಗಳನ್ನು ವಿತರಿಸಿದ್ದಾರೆ. ತಂದೆ ಬಂಗಾರಪ್ಪನವರ ಕನಸಿಗೆ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.

ತೀರ್ಥಹಳ್ಳಿ ಕ್ಷೇತ್ರದಲ್ಲಿ ಮಂಜುನಾಥ ಗೌಡ ಅವರನ್ನು ಶಾಸಕರನ್ನಾಗಿ ಆಯ್ಕೆಮಾಡಿದರೆ ಬಂಗಾರಪ್ಪನವರ ಆಸೆ ಈಡೇರಿದಂತಾಗುತ್ತದೆ ಎಂದರು.

ಜೆಡಿಎಸ್ ಅಭ್ಯರ್ಥಿ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ದಕ್ಷಿಣ ಭಾರತ ರಾಜ್ಯಗಳ ಪೈಕಿ ಕರ್ನಾಟಕ ಹೊರತಾಗಿ ಬೇರೆ ಎಲ್ಲಾ ಕಡೆ ಪ್ರಾದೇಶಿಕ ಪಕ್ಷಗಳು ಅಧಿಕಾರ ನಡೆಸುತ್ತಿವೆ. ಕರ್ನಾಟಕದಲ್ಲೂ ಬದಲಾವಣೆ ಗಾಳಿ ಬೀಸುತ್ತಿದ್ದು, ಜೆಡಿಎಸ್ ಅಧಿಕಾರಕ್ಕೆ ಬರಲಿದೆ .ಸ್ವಾಭಿಮಾನ ರಾಜಕಾರಣ ನಂಬಿದ ಬಂಗಾರಪ್ಪ ಅವರು ನಮಗೆಲ್ಲಾ ಸ್ವಾಭಿಮಾನದ ಶಕ್ತಿ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಮಧು ಬಂಗಾರಪ್ಪ ಅವರಿಗೆ ಸದನದಲ್ಲಿ ಏಯ್ ಎಂದು ನಿಂದಿಸಿ ಮಾತನಾಡುವ ಶಾಸಕ ಕಿಮ್ಮನೆ ರತ್ನಾಕರ್ ಅವರ ದರ್ಪಕ್ಕೆ ಕ್ಷೇತ್ರದ ಜನರು ಪಾಠ ಕಲಿಸಬೇಕಿದೆ.ಅಪಪ್ರಚಾರ ನಡೆಸುತ್ತಿರುವ ಪ್ರತಿಸ್ಪರ್ದಿಗಳಿಗೆ ಯಾವುದೇ ನೈತಿಕತೆ ಉಳಿದಿಲ್ಲ. ತೀರ್ಥಹಳ್ಳಿ ಭಾಗದ ತುಂಗಾ ನದಿ ನೀರು, ಮರಳು ಇಲ್ಲಿನ ಜನರಿಗೆ ಸಿಗುತ್ತಿಲ್ಲ ಎಂದು ಅವರು ದೂರಿದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ಮದನ್, ಹೊಸನಗರ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, , ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಮಟ್ಟಿಮನೆ ರಾಮಚಂದ್ರ, ಚಿಡುವ ಮಂಜುನಾಥ್, ಚಿಡುವ ಸೂರ್ಯನಾರಾಯಣ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಆರ್.ಡಾಕಪ್ಪ, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಜೀನಾ ವಿಕ್ಟರ್, ಅಡ್ಡಗುಡ್ಡೆ ಮಹೇಶ ನಾಯಕ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿನಂತಿ ಕರ್ಕಿ, ತಾಲ್ಲೂಕು ರೈತ ಘಟಕದ ಹೊರಬೈಲು ರಾಮಕೃಷ್ಣ , ತಾಲ್ಲೂಕು ಯುವ ಘಟಕದ ಅಧ್ಯಕ್ಷ ಯಡೂರು ಸುರೇಂದ್ರ, ಎಸ್ಟಿ ಎಸ್ಟಿ ಘಟಕ ಅಧ್ಯಕ್ಷ ಆನಂದ , ಕೊಡಚಾದ್ರಿ ಮಹಿಳಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷೆ ಸುಷ್ಮಾ ಸಂಜಯ್ ಉಪಸ್ಥಿತರಿದ್ದರು.

ಚಿಡುವ ಸಂಜಯ್ ಕಾರ್ಯಕ್ರಮ ನಿರೂಪಿಸಿದರು.


‘ಅಮಿತ್ ಶಾ ಬಂದ ಮೇಲೆ ಅಡಿಕೆ ದರ ಇಳಿಕೆ
ತೀರ್ಥಹಳ್ಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಭೇಟಿ ನೀಡಿದ ನಂತರ ಅಡಕೆ ದರ ಕ್ವಿಂಟಾಲ್ ಗೆ ₨4000 ಇಳಿದಿದೆ. ಅಡಕೆ ದರ ಏರಿಕೆಗೆ ನಾನೇ ಕಾರಣ ಎಂದು ಹೇಳುವ ಆರಗ ಜ್ಞಾನೇಂದ್ರ ಈಗ ಸುಮ್ಮನಿರುವುದು ಏಕೆ.ಅಡಕೆ ರುಚಿ ಇದೆ ಎಂದು ಹೇಳು ಅಮಿತ್ ಷಾ ತೀರ್ಥಹಳ್ಳಿಗೆ ಬರಬೇಕೇ? ಕೇಂದ್ರ , ರಾಜ್ಯ ಸರ್ಕಾರ ಅಡಕೆಗೆ ಒಟ್ಟು ಶೇ.26ರಷ್ಟು ತೆರಿಗೆ ವಿದಿಸುತ್ತಿವೆ. ರೈತ ನಾಯಕ ಎಂದು ಕರೆಯಿಸಿಕೊಳ್ಳುವ ಯಡಿಯೂರಪ್ಪನವರಿಗೆ ಇದೆಲ್ಲಾ ಗೊತ್ತಾಗಲ್ವ ’ಎಂದು ಮಂಜುನಾಥ ಗೌಡ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT