ಮಂಗಳೂರು: ಬಿರುಕು ಬಿಟ್ಟಿದ್ದ ಮರವೂರು ಸೇತುವೆಯನ್ನು ಮತ್ತೆ ಸರಿಪಡಿಸಲಾಗುತ್ತಿದ್ದು, ಇದಕ್ಕಾಗಿ ಹೈಡ್ರೋಲಿಕ್ ಜ್ಯಾಕ್ ಬಳಸುವ ಮೂಲಕ ತಾತ್ಕಾಲಿಕವಾಗಿ ಸಂಚಾರಕ್ಕೆ ಅನುವು ಮಾಡಿಕೊಲಾಗುತ್ತಿದೆ.
‘ಸೇತುವೆಯು 2.5 ಅಡಿಯಷ್ಟು ಕುಸಿದಿತ್ತು. ಇದೀಗ ಆಧುನಿಕ ತಂತ್ರಜ್ಞಾನ ಬಳಸಿ ಅದನ್ನು ಮತ್ತೆ ಹಳೆಯ ಸ್ಥಿತಿಗೆ ತರಲಾಗಿದೆ. ಸಮರೋಪಾದಿಯಲ್ಲಿ ಸೇತುವೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಎರಡು ವಾರದಲ್ಲಿ ಸೇತುವೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್ ತಿಳಿಸಿದ್ದಾರೆ.
‘ಸುಮಾರು 100ಕ್ಕೂ ಅಧಿಕ ಕಾರ್ಮಿಕರು ಹಗಲು ರಾತ್ರಿ ಎನ್ನದೇ ಕಾಮಗಾರಿಯಲ್ಲಿ ತೊಡಗಿದ್ದಾರೆ. ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರಯ್ಯ ತಿಳಿಸಿದ್ದಾರೆ.
ಬೆಂಗಳೂರಿನ ಸ್ಟ್ರಕ್ ಜಿಯೊಟೆಕ್ ಸಂಶೋಧನಾ ಪ್ರಯೋಗಾಲಯದ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ಜೈಗೋಪಾಲ್ ಅವರ ಸಲಹೆಯಂತೆ ಲೋಕೋಪಯೋಗಿ ಇಲಾಖೆಯು ಈ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆರಂಭದಲ್ಲಿ ಸೇತುವೆಯ ಪಿಲ್ಲರ್ನ ಅಡಿಯಲ್ಲಿ ಕಲ್ಲು, ಮರಳಿನ ಚೀಲಗಳನ್ನು ಇಟ್ಟು, ಭದ್ರತೆ ಒದಗಿಸಲಾಗಿತ್ತು. ಜೊತೆಗೆ ನದಿ ನೀರಿನ ಹರಿವನ್ನು ತಿರುಗಿಸಲಾಗಿತ್ತು.
ಮುಗರೋಡಿ ಕನ್ಸ್ಟ್ರಕ್ಸನ್ ಸಂಸ್ಥೆಯು ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಗಿನವರೆಗೆ ನಡೆದ ಕಾಮಗಾರಿಯಲ್ಲಿ 1ಸಾವಿರ ಟನ್ ತೂಕದ ಜ್ಯಾಕ್ ಮೂಲಕ ಕುಸಿದ ಸೇತುವೆಯನ್ನು ಮೇಲಕ್ಕೆತ್ತಿ ಸರಿ ಮಾಡುವ ಕಾಮಗಾರಿ ನಡೆಸಿದ್ದಾರೆ. ಈ ಹಿಂದೆ ಹೊನ್ನಾವರ ಸೇತುವೆಯಲ್ಲಿ ಇಂತಹ ತಂತ್ರಜ್ಞಾನವನ್ನು ಬಳಸಲಾಗಿತ್ತು. ಲೋಕೋಪಯೋಗಿ ಇಲಾಖೆಯ ಮಾರ್ಗದರ್ಶನದಲ್ಲಿ ಈ ಕಾಮಗಾರಿಯ ನಡೆಯುತ್ತಿದೆ.
ಜೂನ್ 15ರಂದು ಮಂಗಳೂರಿನಿಂದ ಬಜ್ಪೆ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಟೀಲು ಕಡೆಗೆ ಸಂಪರ್ಕಿಸುವ ಬಿರುಕು ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಸೇತುವೆ ಮೇಲೆ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸೇತುವೆಯ ಆ ಬದಿಯಲ್ಲಿರುವ ಬಜ್ಪೆ, ಕಟೀಲಿನ ಜನರು ಮಂಗಳೂರಿಗೆ ಜೋಕಟ್ಟೆ ಮೂಲಕ ಬರಬೇಕಾಗಿತ್ತು.
ಅದರಲ್ಲೂ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಸಹ ಜೋಕಟ್ಟೆ ಮೂಲಕ ಬರಬೇಕಾಗಿದ್ದು, ಇದರಿಂದಾಗಿ ಪ್ರಯಾಣಿಕರು ಕೇರಳದ ಕಣ್ಣೂರಿನ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾರೆ. ಇದರಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವ ಆದಾಯದಲ್ಲಿ ತುಂಬಾ ವ್ಯತ್ಯಯವಾಗಿದೆ. ಇದರಿಂದ ಈ ಸೇತುವೆಯನ್ನು ಸರಿಪಡಿಸಿ ಶೀಘ್ರದಲ್ಲಿಯೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದ ಲೋಕೋಪಯೋಗಿ ಇಲಾಖೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.