ಬೆಳ್ತಂಗಡಿ: ತಾಲ್ಲೂಕಿನಲ್ಲಿ ಶನಿವಾರ ಮಧ್ಯಾಹ್ನ ಬಳಿಕ ಗುಡುಗು, ಸಿಡಿಲು ಸಹಿತ ಎರಡು ತಾಸಿಗಳಿಗೂ ಅಧಿಕ ಸಮಯ ಮಳೆಯಾಗಿದೆ.
ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ, ಮುಂಡಾಜೆ, ಕಲ್ಮಂಜ, ಗೇರುಕಟ್ಟೆ, ಗುರು ವಾಯನಕೆರೆ, ಗುರಿಪಳ್ಳ, ಮಡಂತ್ಯಾರು, ವೇಣೂರು, ಅಳದಂಗಡಿ, ನಾರಾವಿ ಸಹಿತ ಎಲ್ಲೆಡೆ ಬಿರುಸಿನ ಮಳೆಯಾಗಿದೆ.
ಬೆಳ್ತಂಗಡಿ ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ವಾರಗಳಿಂದ ಸಂಜೆ ಮಳೆಯಾಗುತ್ತಿದೆ. ನೀರಿನ ಅಭಾವ ಎದುರಾಗಿರುವಾಗ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿಕರಿಗೆ ವರದಾನವಾಗಿದೆ.
ಶನಿವಾರ ಮಧ್ಯಾಹ್ನ 3ರ ಬಳಿಕ ಆರಂಭವಾದ ಮಳೆ ಸಂಜೆ 6ರ ಬಳಿಕವೂ ನಿರಂತರ ಸುರಿದಿದೆ. ಉಜಿರೆಯಲ್ಲಿ ಚರಂಡಿ ಕಾಮಗಾರಿ ಆರಂಭವಾಗಿದ್ದು ಮಳೆ ಅಡ್ಡಿಯಾಗಿದೆ.
ವಿದ್ಯುತ್ ಕಂಬ ಧರೆಗೆ
ವಿಟ್ಲ: ವಿಟ್ಲ ಪರಿಸರದಾದ್ಯಂತ ಗುಡುಗು, ಗಾಳಿ ಸಹಿತ ಭಾರಿ ಮಳೆಯಾಗಿದ್ದು, ಹಾನಿ ಸಂಭವಿಸಿದೆ.
ಸಂಜೆ 5 ಗಂಟೆ ವೇಳೆ ಮಳೆ ಬರಲಾರಂಭಿಸಿದ್ದು, ರಾತ್ರಿ ವರೆಗೂ ಮುಂದುವರಿದಿದೆ. ವಿಟ್ಲ ಉಕ್ಕುಡ ರಸ್ತೆಯ ಕಾಶಿಮಠ ಅಪ್ಪರೆಪಾದೆ ಎಂಬಲ್ಲಿ ಮರದ ಗೆಲ್ಲುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದು, ಹಲವು ಕಂಬಗಳು ಧರೆಶಾಹಿಯಾಗಿದೆ.
ವಿಟ್ಲ ಸುತ್ತಮುತ್ತಲಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಹಲವೆಡೆ ಕೃಷಿಗೆ ಹಾನಿ
ಸುಬ್ರಹ್ಮಣ್ಯ: ಕಡಬ, ಸುಳ್ಯ ತಾಲ್ಲೂಕಿನ ವಿವಿಧೆಡೆ ಶನಿವಾರ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಹಲವೆಡೆ ಕೃಷಿಗೆ ಹಾನಿ ಸಂಭವಿಸಿದೆ.
ಕಡಬ ತಾಲ್ಲೂಕಿನ ಯೇನೆಕಲ್ಲು ಮೇಲ್ಕಟ್ಟ ಉದಯ ಕುಮಾರ್ ಎಂಬುವರ ತೋಟದಲ್ಲಿ ಮರಬಿದ್ದು ಇಪ್ಪತ್ತಕ್ಕೂ ಅಧಿಕ ಅಡಿಕೆ ಮರ ಮುರಿದಿದೆ. ಗಾಳಿಗೆ ಐವತ್ತಕ್ಕೂ ಅಧಿಕ ಅಡಿಕೆ ಮರ, ಒಂದು ತೆಂಗು ಧರೆಗೆ ಉರುಳಿದೆ.
ಕುಕ್ಕೆ ಸುಬ್ರಹ್ಮಣ್ಯ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು, ಯೇನೆಕಲ್ಲು, ಪಂಜ, ಕೈಕಂಬ, ಬಿಳಿನೆಲೆ, ನೂಜಿಬಾಳ್ತಿಲ, ರೆಂಜಿಲಾಡಿ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕಡ್ಯ ಕೊಣಾಜೆ ಸೇರಿದಂತೆ ವಿವಿಧೆಡೆ ಉತ್ತಮ ಮಳೆಯಾಗಿದೆ.