ಮಂಗಳೂರು: ಕ್ರಿಯಾಶೀಲ ಯೋಚನೆಯೊಂದಿಗೆ ಹೊಸ ಹೊಸ ಉತ್ಪನ್ನಗಳನ್ನು ತಯಾರಿಸುವ ‘ಪೇಪರ್ ಸೀಡ್’ ಸಂಸ್ಥೆಯು ಈ ಬಾರಿಯ ರಕ್ಷಾಬಂಧನಕ್ಕೆ ಅಡಿಕೆ ಹಾಳೆಯ ರಾಖಿಗಳನ್ನು ಸಿದ್ಧಗೊಳಿಸಿದೆ.
ಪಕ್ಷಿಕೆರೆಯ ನಿತಿನ್ ವಾಸ್, ಸದಾ ಪರಿಸರಕ್ಕೆ ಪೂರಕವಾದ ಉತ್ಪನ್ನಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರು. ಈ ಹಿಂದೆ ಪರಿಸರ ಸ್ನೇಹಿ ಮಾಸ್ಕ್, ಪೇಪರ್ ಪಲ್ಪ್ನಿಂದ ಗೊಂಬೆ, ತರಕಾರಿ–ಹೂ ಬೀಜಗಳಿಂದ ರಾಖಿ ತಯಾರಿಸಿ ಗ್ರಾಹಕರ ಮನಗೆದ್ದಿರುವ ಅವರು, ಈ ಬಾರಿ ಅಡಿಕೆ ಹಾಳೆಯಲ್ಲಿ ರಾಖಿ ತಯಾರಿಸಿದ್ದಾರೆ.
‘ಹಿಂದೆ ಪೇಪರ್ ಬಳಸಿ ರಾಖಿ ತಯಾರಿಸಿದ್ದೆವು. ಅದು ಮಳೆಗಾಲದಲ್ಲಿ ಒದ್ದೆಯಾಗುತ್ತದೆ ಎಂದು ಹಲವರು ಹೇಳಿದ್ದರು. ಅದಕ್ಕಾಗಿ ಸ್ಥಳೀಯ ಸಂಪನ್ಮೂಲ ಬಳಸಿ, ಹೊಸ ಯೋಚನೆಯೊಂದಿಗೆ ಅಡಿಕೆ ಹಾಳೆ ರಾಖಿ ತಯಾರಿಸಿದ್ದೇವೆ. ಇದಕ್ಕೆ ತರಕಾರಿ, ಹಣ್ಣಿನ ಬೀಜ ಅಂಟಿಸಿರುವುದರಿಂದ ಬಿಸಾಡಿದರೂ ಇದು ಗಿಡವಾಗಿ ಚಿಗುರೊಡೆಯುತ್ತದೆ’ ಎನ್ನುತ್ತಾರೆ ನಿತಿನ್ ವಾಸ್.