ಮಂಗಳೂರು: ಪಕ್ಷಿಕೆರೆಯ ಪೇಪರ್ ಸೀಡ್ ಸಂಸ್ಥೆಯ ನಿತಿನ್ ವಾಸ್ ಅವರು ರಕ್ಷಾ ಬಂಧನದ ನಿಮಿತ್ತ ಪರಿಸರ ಸ್ನೇಹಿ ಮರು ಬಳಕೆ ಆಗುವಂತಹ ಹಾಗೂ ವಿವಿಧ ಬಗೆಯ ತರಕಾರಿ ಬೀಜಗಳನ್ನು ಅಳವಡಿಸಿದ ರಾಖಿಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.
ಉದ್ಯಮಿ ನಿತಿನ್ ಅವರು ಟೊಮೆಟೊ, ಸೌತೆಕಾಯಿ, ಹರಿವೆ, ತುಳಸಿ ಬೀಜಗಳಿಂದ ರಾಖಿಗಳನ್ನು ತಯಾರಿಸಿದ್ದಾರೆ. ರಕ್ಷಾ ಬಂಧನಕ್ಕೆ ಸಹೋದರಿಯರು ಕಟ್ಟುವ ರಾಖಿಗಳನ್ನು ಕೆಲ ದಿನಗಳ ಬಳಿಕ ಎಸೆಯುವ ಬದಲು, ಇವುಗಳಿಂದ ಹಸಿರು ಬೆಳೆಸಬಹುದು ಎನ್ನುವ ಉದ್ದೇಶದಿಂದ ಈ ರಾಖಿ ತಯಾರಿಸಲಾಗಿದೆ.
ಈಗಾಗಲೇ ರಾಖಿ ತಯಾರಿಸಿದ್ದು, ಕೋವಿಡ್–19 ನಿರ್ಬಂಧದಿಂದಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಾಗೂ ಜನರಿಗೆ ತಲುಪಿಸಲು ಸಮಸ್ಯೆಯಾಗಿದೆ. ಆನ್ಲೈನ್, ವಾಟ್ಸ್ಆ್ಯಪ್ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ.
‘ನಮ್ಮ ಎಲ್ಲ ಉತ್ಪನ್ನಗಳು ಪ್ಲಾಸ್ಟಿಕ್ ರಹಿತವಾಗಿವೆ. ಬೀಜ, ಕಾಗದ ಟೆರಾಕೋಟಾದಿಂದ ರಾಖಿಗಳನ್ನು ತಯಾರಿಸಿದ್ದು, ಕಳೆದ ವರ್ಷದ ಸ್ವಾತಂತ್ರ್ಯೋತ್ಸವಕ್ಕೆ 11 ಸಾವಿರ ಪೇಪರ್ ಸೀಡ್ ಧ್ವಜಗಳನ್ನು ತಯಾರಿಸಲಾಗಿತ್ತು. ಹೈದರಾಬಾದ್ನ ಸರ್ಕಾರೇತರ ಸಂಸ್ಥೆ ‘ಸಹಾಯ’ ಹಾಗೂ ಹಲವು ಸ್ವಯಂ ಸೇವಕರು ಉತ್ಪನ್ನಗಳನ್ನು ಕೈಯಿಂದ ತಯಾರಿಸಲು ಸಹಾಯ ಮಾಡಿದ್ದಾರೆ’ ಎಂದು ನಿತಿನ್ ವಾಸ್ ಹೇಳುತ್ತಾರೆ.
‘ಆರಂಭದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದು ತಿಳಿದಿರಲಿಲ್ಲ. ಹೀಗಾಗಿ ನಾಲ್ಕು ಬೀಜಗಳನ್ನು ಉಪಯೋಗಿಸಿ ರಾಖಿ ತಯಾರಿಸಲಾಗಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ, ಬರುವ ವರ್ಷದಿಂದ ಇನ್ನೂ ಹೆಚ್ಚಿನ ಬೀಜಗಳನ್ನು ಬಳಸಿ, ರಾಖಿ ತಯಾರಿಸಲಾಗುವುದು’ ಎಂದು ತಿಳಿಸಿದ್ದಾರೆ.
ಮಾಹಿತಿಗೆ ನಿತಿನ್ ವಾಸ್ ಮೊ: 91087 54870 ಅವರನ್ನು ಸಂಪರ್ಕಿಸಬಹುದು.