ಮಂಗಳೂರು: ಕಳೆದ ಮೂವತ್ತೈದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾ ರಂಗಮಂದಿರವನ್ನು ಶೀಗ್ರ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಶನಿವಾರ ನಗರದಲ್ಲಿ ನಡೆದ ಜಿಲ್ಲಾ ರಂಗಮಂದಿರ ಹೋರಾಟ ಸಮಿತಿಯ ತುರ್ತು ಸಭೆ ನಿರ್ಣಯಿಸಿತು.
ಸಮಿತಿ ಗೌರವಾಧ್ಯಕ್ಷ ರಾಮಚಂದ್ರ ಬೈಕಂಪಾಡಿ ಸಭೆ ನೇತೃತ್ವ ವಹಿಸಿದ್ದರು.
ಸಮಿತಿಯ ಅಧ್ಯಕ್ಷ ಶಶಿರಾಜ್ ಕಾವೂರು ಮಾತನಾಡಿ, ‘ಈಗಾಗಲೇ ಕರಾವಳಿ ಉತ್ಸವದ ಮೂಲಕ ಸಂಗ್ರಹವಾದ ಹಣ ಸೇರಿದಂತೆ ಸುಮಾರು ₹4.5 ಕೋಟಿ ಜಿಲ್ಲಾ ರಂಗಮಂದಿರದ ಹೆಸರಲ್ಲಿ ವಿವಿಧ ಖಾತೆಗಳಲ್ಲಿ ಇದೆ. ಸರ್ಕಾರದಿಂದ ₹7 ಕೋಟಿ ಮಂಜೂರಾಗಿದೆ. ಆದರೆ, ಕಾಮಗಾರಿ ಇನ್ನೂ ಆರಂಭವಾಗಿಲ್ಲ’ ಎಂದು ಹೇಳಿದರು.
‘₹8 ಕೋಟಿಯಲ್ಲಿ ಸುಸಜ್ಜಿತ ರಂಗಮಂದಿರ ಕಟ್ಟಲು ಸಾಧ್ಯವಿದೆ. ಆದ್ದರಿಂದ ಜಿಲ್ಲಾಧಿಕಾರಿ, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಮನವರಿಕೆ ಮಾಡಿ, ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಲು ಪ್ರೇರೇಪಿಸಬೇಕು’ ಎಂದು ಸಭೆ ನಿರ್ಧರಿಸಿತು.
ಸಮಿತಿಯ ಕಾರ್ಯದರ್ಶಿ ಜಗನ್ ಪವಾರ್ ಬೇಕಲ್, ಹಿರಿಯ ಕಲಾವಿದರಾದ ಗೋಪಾಡ್ಕರ್, ಗಣೇಶ್ ಸೋಮಯಾಜಿ, ಪ್ರಕಾಶ್ ಶೆಣೈ, ಕೆ.ಕೆ.ಪೇಜಾವರ, ಮಂಜುಳ ಶೆಟ್ಟಿ, ರಾಜೇಶ್ ಸ್ಕೈಲಾರ್ಕ್, ಮೈಮ್ ರಾಮದಾಸ್, ರಾಕೇಶ್ ಹೊಸಬೆಟ್ಟು, ವಿನೋದ್, ರಾಜೇಶ್, ದಯಾನಂದ ಹಿರೇಮಠ, ಸುಮಂತ್ ಶೆಟ್ಟಿ, ಅವಿನಾಶ್ ಎಸ್. ಇದ್ದರು.