ಮಂಗಳೂರು: ದುಬೈನಿಂದ ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದಿರುವ ಕಂದಾಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ₹67 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳವಾರ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಭಟ್ಕಳದ ಪ್ರಯಾಣಿಕ ಚಿನ್ನದ ಪೇಸ್ಟ್ ಅನ್ನು ಚೆಂಡಿನ ರೂಪದಲ್ಲಿ ಗುದದ್ವಾರದಲ್ಲಿ ಇಟ್ಟುಕೊಂಡು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈತನಿಂದ 641.41 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ಕಾಸರಗೋಡಿನ ಇನ್ನೊಬ್ಬ ಪ್ರಯಾಣಿಕ ತನ್ನ ಒಳಉಡುಪಿನಲ್ಲಿ ವಿಶೇಷ ಪ್ಯಾಕೇಟ್ನಲ್ಲಿ ಅಡಗಿಸಿ ಇಟ್ಟಿದ್ದ 646.67 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಈ ಇಬ್ಬರು ಚಿನ್ನದ ಅಕ್ರಮ ಸಾಗಣೆ ಮಾಡುವ ಜಾಲಕ್ಕೆ ಸೇರಿರಬಹುದು ಎಂದು ಶಂಕಿಸಲಾಗಿದೆ. ಲಾಕ್ಡೌನ್ ಸಡಿಲಿಕೆಯ ನಂತರ ಅಂತರರಾಷ್ಟ್ರೀಯ ವಿಮಾನ ಸಂಚಾರ ಆರಂಭವಾಗಿದ್ದು, ಚಿನ್ನದ ಅಕ್ರಮ ಸಾಗಣೆ ಪ್ರಕರಣಗಳೂ ಹೆಚ್ಚಾಗುತ್ತಿವೆ ಎಂದು ಕಂದಾಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.