ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಳೆ ವಿಚಾರವು ಇವತ್ತಿನ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ನಾನು ಇಂದು ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲಿದ್ದೇನೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.
ಬುಧವಾರ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದರು.
ಪರಿಷತ್ಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಿ ಫಾರಂ ಸಿದ್ಧವಿದೆ. ಇಂದೇ ಎಲ್ಲವೂ ಅಂತಿಮ ಆಗಲಿದೆ’ ಎಂದರು.
‘ನಮ್ಮ ತಂದೆಯ ಕಾಲದಿಂದಲೂ ಮಠದ ಜೊತೆ ಒಡನಾಟ ಹೆಚ್ಚು. ಡಿಸಿಎಂ ಆದ ಬಳಿಕ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡಬೇಕು ಎಂಬುದು ಶ್ರೀಗಳ ಆಶಯವೂ ಆಗಿದೆ. ಸಂಪುಟ ರಚನೆ ಸದ್ಯದಲ್ಲೇ ಆಗಲಿದೆ’ ಎಂದು ಹೇಳಿದರು.