ಪುತ್ತೂರು: ‘ಅನಿರೀಕ್ಷಿತವಾಗಿ ಸಂಭವಿಸುವ ವಿಪತ್ತುಗಳನ್ನು ಎದರಿಸಲು ಸದಾ ಸನ್ನದ್ಧರಾಗಿ ಇರಬೇಕಾಗುತ್ತದೆ. ಸ್ಥಳೀಯರಲ್ಲಿ ವಿಪತ್ತು ನಿರ್ವಹಣೆ ಮಾಡುವ ಅರಿವು ಮತ್ತು ಕೌಶಲವಿದ್ದರೆ ರಕ್ಷಣಾ ಕಾರ್ಯ ಸುಲಭವಾಗುತ್ತದೆ. ಧರ್ಮಸ್ಥಳ ಯೋಜನೆಯವರು ಅವರದ್ದೇ ಆದ ವಿಪತ್ತು ನಿರ್ವಹಣಾ ತಂಡ ರಚಿಸಿಕೊಂಡು ವಿಷತ್ತುಗಳ ನಿರ್ವಹಣೆಗೆ ಮುಂದಾಗಿರುವುದು ಶ್ಲಾಘನೀಯ’ ಎಂದು ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಹೇಳಿದರು.
ಪುತ್ತೂರಿನ ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು, ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಮತ್ತು ಪುತ್ತೂರು ಅಗ್ನಿಶಾಮಕ ದಳದ ಸಹಭಾಗಿತ್ವದಲ್ಲಿ ಪ್ರಾರಂಭಗೊಂಡ 60ನೇ ‘ಶೌರ್ಯ’ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಮತ್ತು ಸ್ವಯಂ ಸೇವಕರಿಗೆ ಬುಧವಾರ ಆಯೋಜಿಲಾಗಿದ್ದ ಒಂದು ದಿನದ ಜೀವ ರಕ್ಷಕ ಕೌಶಲ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳ ಯೋಜನೆಯ ವಿಷತ್ತು ರಕ್ಷಣಾ ತಂಡದವರು ತಾಲ್ಲೂಕಿನ ಟಾಸ್ಕ್ ಪೋರ್ಸ್ ಜತೆ ಕೈಜೋಡಿಸಿ ಕೆಲಸ ಮಾಡಲಿದ್ದಾರೆ. ಇತ್ತೀಚೆಗೆ ಸುಳ್ಯ ತಾಲ್ಲೂಕಿನ ಕೆಲವು ಕಡೆ ಕೇವಲ 4 ಗಂಟೆಯಲ್ಲಿ 23 ಸೆಂ.ಮೀ. ಮಳೆ ಸುರಿದು ಅಪಾರ ಹಾನಿ ಉಂಟಾಯಿತು. ಆಗ ಎನ್ಡಿಆರ್ಎಫ್ ತಂಡ ನಿಯೋಜಿಸಬೇಕಾಯಿತು ಎಂದು ಉಲ್ಲೇಖಿಸಿದರು.
ಪುತ್ತೂರು ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ್, ತಹಶೀಲ್ದಾರ್ ಕೆ.ಎಸ್.ನಿಸರ್ಗಪ್ರಿಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಮಹಾಬಲ ರೈ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಎಸ್ಡಿಎಂಎಸಿ ಅಧ್ಯಕ್ಷ ರಮೇಶ್ಚಂದ್ರ, ಶಾಲೆಯ ಮುಖ್ಯ ಶಿಕ್ಷಕಿ ನಳಿನಿ ವಾಗ್ಲೆ, ಅಗ್ನಿಶಾಮಕ ದಳದ ಠಾಣಾಧಿಕಾರಿ ವಿ. ಸುಂದರ್, ಜನಜಾಗೃತಿ ವೇದಿಕೆ ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ತಿಮ್ಮಯ್ಯ ಇದ್ದರು.
ಬೆಳ್ತಂಗಡಿ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ್ ಪಟಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಆನಂದ್ ಸ್ವಾಗತಿಸಿದರು. ಯೋಜನೆಯ ಕೃಷಿ ಯೋಜನಾಧಿಕಾರಿ ಉಮೇಶ್ ಗೌಡ ನಿರೂಪಿಸಿದರು. ಅಗ್ನಿಶಾಮಕ ದಳದ ಲೀಲಾಧರ್ ಮತ್ತು ಶಂಕರ್ ಅವರು ತರಬೇತಿ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.