ಮಂಗಳೂರು: ಜಾನುವಾರು ಸಂರಕ್ಷಣೆ ಮತ್ತು ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗ ದಳ ಮುಖಂಡರು ಬಲಿ ಅಥವಾ ಕುರ್ಬಾನಿಗಾಗಿ ಪ್ರಾಣಿಗಳನ್ನು ಸಾಗಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ನ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ ‘ಅಕ್ರಮವಾಗಿ ಗೋವುಗಳನ್ನು ಸಾಗಿಸಿದರೆ ವಾಹನ ಮಾಲೀಕರು, ಚಾಲಕರು ಮತ್ತು ಜಾನುವಾರು ಮಾಲೀಕರು ಅಪರಾಧಿಗಳಾಗುತ್ತಾರೆ’ ಎಂದರು.
‘ಪೊಲೀಸರು ಪ್ರಮುಖ ಸ್ಥಳಗಳಲ್ಲಿ ನಾಕಾ ಬಂದಿ ಹಾಕಿ ಗೋವುಗಳ ಸಾಗಾಟ ತಡೆಯಬೇಕು. ಈ ಹಿಂದೆ ಅಪರಾಧ ಮಾಡಿರುವವರನ್ನು ಪತ್ತೆ ಮಾಡಿ ಬಕ್ರಿದ್ ವರೆಗೆ ಅವರ ಮೇಲೆ ನಿರ್ಬಂಧಗಳನ್ನು ಹೇರಬೇಕು. ಗೋವುಗಳ ಅಕ್ರಮ ಸಾಗಾಟ ಕಂಡುಬಂದಲ್ಲಿ ಸಾರ್ವಜನಿಕರು ತುರ್ತು ದೂರವಾಣಿ ಸಂಖ್ಯೆ 112ಕ್ಕೆ ಅಥವಾ ಪ್ರಾಣಿ ಸಂರಕ್ಷಣಾ ಸಹಾಯವಾಣಿ 2277100200ಗೆ ಕರೆ ಮಾಡಬಹುದು. ಬಜರಂಗ ದಳ ಕಾರ್ಯಕರ್ತರಿಗೂ ಮಾಹಿತಿ ನೀಡಬಹುದು’ ಎಂದು ಅವರು ಹೇಳಿದರು.
ವಿಶ್ವ ಹಿಂದೂ ಪರಿಷರ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ ಕುತ್ತಾರ್, ಜಿಲ್ಲಾ ಗೋರಕ್ಷಾ ಪ್ರಮುಖ್ ಪ್ರದೀಪ್ ಪಂಪ್ವೆಲ್, ಬಜರಂಗ ದಳದ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಬಜರಂಗ ದಳದ ಜಿಲ್ಲಾ ಗೋರಕ್ಷಾ ಪ್ರಮುಖ್ ಪವಿತ್ರ ತೊಕ್ಕೊಟ್ಟು ಇದ್ದರು.