ಮಂಗಳೂರು: ಕೆಲವೇ ದಿನಗಳ ಅಂತರದಲ್ಲಿ ನಡೆದ ಮಸೂದ್, ಪ್ರವೀಣ್ ನೆಟ್ಟಾರು ಹಾಗೂ ಮಹಮ್ಮದ್ ಫಾಝಿಲ್ ಅವರ ಹತ್ಯೆಯಿಂದ ಉಂಟಾಗಿರುವ ಆತಂಕದ ವಾತಾವರಣ ತಿಳಿಯಾಗಿಸಲು ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ‘ರಾತ್ರಿ ಕರ್ಫ್ಯೂ’ ಮಾದರಿಯ ಬಿಗಿ ಕ್ರಮ ಕೈಗೊಂಡಿದೆ. ಆಗಸ್ಟ್ 1ರವರೆಗೆ ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ವ್ಯಾಪಾರ– ವಹಿವಾಟು ನಡೆಸಲು ಅವಕಾಶ ನೀಡಿದ್ದು, ಅತ್ಯವಶ್ಯಕ ಸೇವೆ ಹೊರತುಪಡಿಸಿ ಉಳಿದ ವಹಿವಾಟು ಹಾಗೂ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದೆ. ಮದ್ಯ ಮಾರಾಟ ನಿಷೇಧಿಸಿದೆ.
ಸುಳ್ಯ ಹಾಗೂ ಸುಬ್ರಹ್ಮಣ್ಯ ಪಿಎಸ್ಐ ಅವರನ್ನು ವರ್ಗಾವಣೆ ಮಾಡಲಾಗಿದೆ.
ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಮೆರವಣಿಗೆ ವೇಳೆ ತಮ್ಮ ಮೇಲೆ ಲಾಠಿಪ್ರಹಾರ ನಡೆಸಿದ್ದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಕಾರ್ಯಕರ್ತರು ಪಟ್ಟು ಹಿಡಿದಿದ್ದರು.
ಬಂಟ್ವಾಳ, ಪುತ್ತೂರು, ಕಡಬ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ನಿಷೇಧಾಜ್ಞೆಯನ್ನು ಆಗಸ್ಟ್ 6ವರೆಗೂ ಮುಂದುವರಿಸಲಾಗಿದೆ.
ಸುರತ್ಕಲ್ನಲ್ಲಿ ಗುರುವಾರ ರಾತ್ರಿ ಫಾಝಿಲ್ ಅವರ ಹತ್ಯೆಯಾಗಿರುವ ಕಾರಣ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಮಾಡಲಾಗಿವೆ. ಈ ವ್ಯಾಪ್ತಿಯ ಶಾಲೆಗಳಿಗೆ ಶುಕ್ರವಾರ ರಜೆ ನೀಡ
ಲಾಗಿತ್ತು. ಜಿಲ್ಲೆಯಲ್ಲಿರುವ ಸಂಜೆಯ ಕಾಲೇಜುಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ.
ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ದಕ್ಷಿಣ ಕನ್ನಡ ಜಿಲ್ಲಾ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರವೀಣ್ ಮನೆಗೆ ಭೇಟಿ ನೀಡಲು ಬಂದ ಅವರನ್ನು, ಗಡಿಭಾಗದ ಹೆಜಮಾಡಿ ಚೆಕ್ಪೋಸ್ಟ್ ಬಳಿ ತಡೆದು ವಾಪಸ್ ಕಳಿಸಲಾಯಿತು. ಈ ವೇಳೆ ಶ್ರೀರಾಮಸೇನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸ್ವಾಮೀಜಿ ಭೇಟಿ:
ಕೇರಳದ ಶಿವಗಿರಿ ಮಠದ ಸತ್ಯಾನಂದತೀರ್ಥ ಸ್ವಾಮೀಜಿ ಹಾಗೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಮಠದ ಅರುಣಾನಂದತೀರ್ಥ ಸ್ವಾಮೀಜಿ ಅವರು ಪ್ರವೀಣ್ ನೆಟ್ಟಾರು ಅವರ ಮನೆಗೆ ಶುಕ್ರವಾರ ಭೇಟಿ ನೀಡಿ, ಬಂಧುಗಳಿಗೆ ಸಾಂತ್ವನ ಹೇಳಿದರು.
ಪುತ್ತೂರು ಬಿಲ್ಲವ ಸಂಘದಿಂದ ₹50 ಸಾವಿರ ನೆರವು ನೀಡಲಾಯಿತು. ಯಾದಗಿರಿಯಿಂದ ಬಂದಿದ್ದ ರಾಮಸೇನಾ ಕರ್ನಾಟಕದ ಕಾರ್ಯಕರ್ತರು ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಶಾಸಕ ರಾಜೂ ಗೌಡ ಅವರು ಕಳುಹಿಸಿದ್ದ ₹2 ಲಕ್ಷ ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.